ಸಿರವಾರ: ‘ಸಮೀಪದ ನಕ್ಕುಂದಿ ಗ್ರಾಮದ ವಿತರಣೆಯ 76/3/1 ಉಪಕಾಲುವೆಗೆ ಕಟ್ ಓಪನ್ ಹಾಗೂ ಬೆಡ್ ಕಾಂಕ್ರೀಟ್ ಕಂಟ್ರೋಲ್ ಪಾಯಿಂಟ್ ಅನ್ನು ಕಾನೂನು ಬಾಹಿರವಾಗಿ ನಿರ್ಮಿಸಿ ನೀರಾವರಿ ಇಲಾಖೆಯ ಅಧಿಕಾರಿಗಳೇ ಅಕ್ರಮಕ್ಕೆ ಕಾರಣರಾಗಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೈತರು ಪಟ್ಟಣದ ನೀರಾವರಿ ನಿಗಮ ಉಪ ವಿಭಾಗದ ಕಚೇರಿ ಆವರಣದಲ್ಲಿ ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
‘ಅಕ್ರಮ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿರೆಕೊಟ್ನೆಕಲ್ ನೀರಾವರಿ ಕಚೇರಿಯ ಸಹಾಯಕ ಎಂಜಿನಿಯರ್ಗೆ ಈಗಾಗಲೇ ಲಿಖಿತ ಹಾಗೂ ಮೌಖಿಕವಾಗಿ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಒತ್ತಡಕ್ಕೆ ಮಣಿದು ಅಕ್ರಮವಾಗಿ ಕಟ್ ಓಪನ್ ಹಾಗೂ ಬೆಡ್ ಕಾಂಕ್ರೀಟ್ ಕಂಟ್ರೋಲ್ ಪಾಯಿಂಟ್ ಅನ್ನು ನಿರ್ಮಿಸಿ ರೈತರನ್ನು ಸಂಕಷ್ಟಕ್ಕೆ ದೂಡಿರುವ ಜೆಇಗಳಾದ ರಮೇಶ ಹಾಗೂ ಲಕ್ಷ್ಮಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಲುವೆಯನ್ನು ಮೊದಲಿನ ಸ್ಥಿತಿಯಲ್ಲಿ ಮುಂದುವರಿಸಬೇಕು’ ಎಂದು ಧರಣಿ ನಿರತರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ನಕ್ಕುಂದಿ, ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ನಾಯಕ, ರೈತ ಮುಖಂಡ ವೀರೇಶ ಸೇರಿದಂತೆ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.