ADVERTISEMENT

ದೇವಸೂಗೂರು ಹೋಬಳಿಯಲ್ಲಿ ಬರ, ನೆರೆ!

ಉಮಾಪತಿ ಬಿ.ರಾಮೋಜಿ
Published 12 ಆಗಸ್ಟ್ 2019, 19:46 IST
Last Updated 12 ಆಗಸ್ಟ್ 2019, 19:46 IST
ಶಕ್ತಿನಗರ ಸಮೀಪದ ಯರಗುಂಟ ಗ್ರಾಮದ ರೈತ ಸಿದ್ಧಪ್ಪ ಅವರ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಹತ್ತಿ ಬೆಳೆ ಮೊಳಕೆ ಒಡೆದು ಸಸಿಯಾಗಿವೆ. ಅದನ್ನು ಉಳಿಸಿಕೊಳ್ಳಲು ಬಕೇಟ್‌ಯಿಂದ ನೀರು ಹಾಕುತ್ತಿರುವುದು ಕಂಡುಬಂತು
ಶಕ್ತಿನಗರ ಸಮೀಪದ ಯರಗುಂಟ ಗ್ರಾಮದ ರೈತ ಸಿದ್ಧಪ್ಪ ಅವರ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಹತ್ತಿ ಬೆಳೆ ಮೊಳಕೆ ಒಡೆದು ಸಸಿಯಾಗಿವೆ. ಅದನ್ನು ಉಳಿಸಿಕೊಳ್ಳಲು ಬಕೇಟ್‌ಯಿಂದ ನೀರು ಹಾಕುತ್ತಿರುವುದು ಕಂಡುಬಂತು   

ಶಕ್ತಿನಗರ: ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ ಕೃಷ್ಣಾನದಿ ತೀರದ ಗ್ರಾಮಗಳು ಪ್ರವಾಹದಿಂದ ತತ್ತರಿಸಿದ್ದರೆ, ಇನ್ನುಳಿದ ಗ್ರಾಮಗಳಲ್ಲಿ ಬರ ಆವರಿಸಿದೆ.

ಮಳೆ ಕೊರತೆಯಿಂದ ರೈತರು ಬೆಳೆದ ಬೆಳೆಗಳು ಒಣಗುವ ಸ್ಥಿತಿ ತಲುಪಿದೆ. ಬಿತ್ತನೆ ಮಾಡಿದ್ದ ಬೆಳೆ ಮೊಳಕೆ ಒಡೆದು ಸಸಿಯಾಗಿವೆ. ತೇವಾಂಶವಿಲ್ಲ, ಹೀಗಾಗಿ ಕೆಲವು ರೈತರು ಬಕೆಟ್‌ ಮೂಲಕ ಸಸಿಗೆ ನೀರುಣಿಸುತ್ತಿದ್ದಾರೆ.

ಹೋಬಳಿ ವ್ಯಾಪ್ತಿಯ ಯರಗುಂಟ, ಮಾಮನದೊಡ್ಡಿ, ಸಗಮಕುಂಟ ಸೇರಿ ವಿವಿಧ ಗ್ರಾಮಗಳಲ್ಲಿ ಮುಂಗಾರು ಆರಂಭದಲ್ಲಿ ಮಳೆಯಾಗಿತ್ತು. ಈಚೆಗೆ ಮಳೆ ಕೈ ಕೊಟ್ಟಿರುವುದರಿಂದ ಹತ್ತಿ , ತೊಗರಿ ಬೆಳೆ ಒಣಗಲಾರಂಭಿಸಿವೆ.

ADVERTISEMENT

ಒಂದೇ ಹೋಬಳಿಯಲ್ಲಿ ಎರಡು ರೀತಿಯ ಸನ್ನಿವೇಶ ನಿರ್ಮಾಣವಾಗಿದೆ. ಒಂದೆಡೆ ಕೃಷ್ಣಾನದಿ ಭರ್ತಿಯಾಗಿ ಹರಿಯುತ್ತಿದೆ. ಇನ್ನೊಂದೆಡೆ ಮಳೆ ಕೊರತೆ ಪ್ರದೇಶದ ಹಳ್ಳಿಗಳ ರೈತರಿಗೆ ಪ್ರಸಕ್ತ ವರ್ಷವೂ ಬರಗಾಲದ ಭೀತಿ ಎದುರಾಗಿದೆ. ಜನವರಿಯಿಂದ ಆಗಸ್ಟ್‌ 11ರ ವರೆಗೆ 346 ಮಿಲಿ ಮೀಟರ್‌ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಮಳೆ ಸುರಿದಿದ್ದು 207 ಮಿಲಿ ಮೀಟರ್‌ ಮಾತ್ರ. ಹೋಬಳಿಯಲ್ಲಿ ಶೇ 41 ರಷ್ಟು ಮಳೆ ಕೊರತೆಯಾಗಿದೆ.

ವಿದ್ಯುತ್‌ ಸಮಸ್ಯೆ:ಯರಗುಂಟ, ಮಾಮನದೊಡ್ಡಿ, ಸಗಮಕುಂಟ ಗ್ರಾಮದಲ್ಲಿ ಮೂರು ದಿನಗಳಿಂದ ವಿದ್ಯುತ್ ಇಲ್ಲ.ರೈತರಿಗೆ ಮತ್ತಷ್ಟು ಸಮಸ್ಯೆ ಎದುರಾಗಿದೆ. ಪ್ರವಾಹವಿಲ್ಲದ ಗ್ರಾಮಗಳಲ್ಲಿ ವಿದ್ಯುತ್‌ ಸಮಸ್ಯೆ ಆಗಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರವಾಹ ನೆಪ ಇಟ್ಟುಕೊಂಡು ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಕಡಿತ ಮಾಡಿದ್ದಾರೆ ಎನ್ನುತ್ತಾರೆ ಯರಗುಂಟ ರೈತರಾದ ರಂಗಪ್ಪ, ನರಸಪ್ಪ.

ಬೆಳೆಹಾನಿ: ನದಿತೀರದ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆಯು ನೀರಿನಲ್ಲಿ ಮುಳುಗಡೆಯಾಗಿದ್ದು, ಅಲ್ಲಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಅರಷಣಿಗಿ ಗ್ರಾಮದಲ್ಲಿ 95 ಎಕರೆ, ದೇವಸೂಗೂರು–190, ಗಂಜಳ್ಳಿ–205, ಗುರ್ಜಾಪುರ–270, ಕಾಡ್ಲೂರು–265, ಕರೇಕಲ್–90, ಕೊರ್ವಿಹಾಳ್–250, ಕೊರ್ತಕುಂದಾ–210, ಡಿ.ರಾಂಪುರ–148,ಆತ್ಕೂರು–162, ಬುರ್ದಿಪಾಡ–56 ಎಕರೆ ಸೇರಿ ಒಟ್ಟು 1,981 ಹೆಕ್ಟೇರ್‌ನಷ್ಟು ಪ್ರದೇಶ ಜಲಾವೃತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.