ರಾಯಚೂರು: ಶಿಕ್ಷಕರು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧಿಸಿದಾಗ ಮಾತ್ರ ವೃತ್ತಿ ಸಾರ್ಥಕವಾಗುತ್ತದೆ. ಸೈಯದ್ ಗೌಸ್ ಮೋಯಿನುದ್ದೀನ್ ಫಿರ್ಜಾದೆ ಅವರು ಸನ್ನೆ, ನಡಿಗೆ ಮೂಲಕ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧಿಸಿ ಮಾದರಿಯಾಗಿದ್ದಾರೆ ಎಂದು ನಗರಸಭೆ ಸದಸ್ಯ ಜಯಣ್ಣ ಹೇಳಿದರು.
ನಗರದ ಟ್ಯಾಗೋರ್ ಕಾಲೇಜಿನ ಸಭಾಭವನದಲ್ಲಿ ಮ್ಯಾದಾರ್ ಲಲಿತಾಕಲಾ ಪ್ರತಿಷ್ಠಾನದ ವತಿಯಿಂದ ಭಾನುವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಸೈಯದ್ ಗೌಸ್ ಮೋಯಿನುದ್ದೀನ್ ಪೀರ್ ಜಾದೆ ಅವರ ಸಾಧನೆಯ ಕುರಿತ ಯುವಕವಿ ಈರಣ್ಣ ಬೆಂಗಾಲಿ ಅವರು ಬರೆದ ‘ಅಪರೂಪದ ಕನ್ನಡ ಮೇಷ್ಟ್ರು’ ಕೃತಿ ಲೋಕಾರ್ಪಣೆ ಹಾಗೂ ಅಭಿನಂಧನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉರ್ದು ಶಾಲೆಯಲ್ಲಿ ಅಲ್ಪಸಂಖ್ಯಾತ ಮಕ್ಕಳಿಗೆ ಕನ್ನಡ ಭಾಷೆ ಸವಾಲಿನ ಸಂಗತಿ. ಸೈಯದ್ ಗೌಸ್ ಮೋಯಿನುದ್ದೀನ್ ಪೀರ್ ಜಾದೆ ಅವರು ಕನ್ನಡ ಶಾಲೆಗೆ ಪೈಪೋಟಿ ನೀಡುವಂತೆ ಮಕ್ಕಳಿಗೆ ಕಲಿಸುವ ಪರಿ ಅನುಕರುಣೀಯ ಎಂದು ಹೇಳಿದರು.
ಕನ್ನಡದ ಹೆಸರಿನಲ್ಲಿ ಬಡಾಯಿಕೊಚ್ಚಿಕೊಳ್ಳುವ ಹಲವರಿದ್ದು ಅವರ ನಡುವೆ ಫಿರ್ಜಾದೆ ಎತ್ತರ ಸ್ತರದಲ್ಲಿದ್ದಾರೆ. ಅವರು ಭಾಷೆಯ ಬೆಳವಣಿಗೆಗೆ ಎಲೆಮರೆಯ ಕಾಯಿಯಂತೆ ಕೆಲಸ ಮಾಡಿದ್ದಾರೆ. ಅವರು ಕನ್ನಡದ ಆಸ್ತಿ. ವೃತ್ತಿಯಲ್ಲಿ ಪ್ರಾಮಾಣಿಕತೆ, ಸಮರ್ಪಣಾ ಮನೋಭಾವನೆ ಅಭಿನಂದನೀಯ. ಶಿಕ್ಷಣ ಇಲಾಖೆಯ ಕಳಸ. ಅವರ ಸಾಧನೆಯ ಕುರಿತು ಕೃತಿಯ ಮೂಲಕ ಸಮಾಜಕ್ಕೆ ಪರಿಚಯಿಸುವ ಈರಣ್ಣ ಬೆಂಗಾಲಿ ಅವರ ಕಾರ್ಯ ಮೆಚ್ಚುಗೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಚಿಂತಕ ಧರ್ಮಾಂಧರಿಂದ ಹತನಾಗುತ್ತಾನೆ. ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಂಡು ಹೋಗಬೇಕು. ಪೀರ್ಜಾದೆ ಅವರ ವೃತ್ತಿ ಕೌಶಲ್ಯ ಹಲವರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಮ್ಯಾದರ್ ಲಲಿತಕಲಾ ಪ್ರತಿಷ್ಠಾನದ ಕಾರ್ಯದರ್ಶಿ ರಾಮಣ್ಣ ಮ್ಯಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಯ ಕುರಿತು ಲೇಖಕ ಈರಣ್ಣ ಬೆಂಗಾಲಿ ಮಾತನಾಡಿದರು.
ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಚ್.ಮ್ಯಾದಾರ್, ಸಾಹಿತಿ ವೀರಹನುಮಾನ, ವಕೀಲ ಶರತಕುಮಾರ್ ಕಳಸ, ಸೈಯದ್ ಗೌಸ್ ಮೋಯಿನುದ್ದೀನ್ ಪೀರ್ ಜಾದೆ, ನಿವೃತ್ತ ಮುಖ್ಯಗುರು ಎಂ.ಡಿ.ಅಬ್ದುಲ್ ಲತೀಫ್ ಇದ್ದರು. ವಿಜಯರಾಜೇಂದ್ರ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.