ಮುದಗಲ್: ಈ ಬಾರಿ ನಾನು ಗೆದ್ದರೆ ಮುದಗಲ್ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಮಾಡುವೆ. ತಾಲ್ಲೂಕು ರಚನೆ ಮಾಡದಿದ್ದರೆ ನಿಮಗೆ ಮುಖ ತೋರಿಸುವುದಿಲ್ಲ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ರಂಗಮಂದಿರ ಆವರಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೂತ್ ಮಟ್ಟದ ವಿಜಯ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ನಾನು ಮತ್ತೆ ಶಾಸಕನಾದರೆ ಮುದಗಲ್ ಕೋಟೆ ಉತ್ಸವ ಮಾಡಲಾಗುವುದು. ಅಭಿವೃದ್ಧಿ ವಿಷಯ ಚರ್ಚೆ ಮಾಡುವುದು ಬಿಟ್ಟು ಮಾನಪ್ಪ ವಜ್ಜಲ ಪಲಾಯನ ಮಾಡಿದರು ಎಂದು ಶಾಸಕ ಹೂಲಗೇರಿ ಆರೋಪಿಸಿದ್ದಾರೆ. ಆದರೆ ನಾನು ಅಲ್ಲಿಯೇ ಇನ್ನೂ ಸ್ವಲ್ಪ ಹೊತ್ತು ಕುಳಿತಿದ್ದರೇ ನಿಮ್ಮ ಬಂಡವಾಳ ಬಯಲಾಗುತ್ತಿತ್ತು. ದೊಡ್ಡ ಗಲಾಟೆ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ನಾನು ಅಲ್ಲಿಂದ ಬಂದೆ ಎಂದರು.
ಜ.19 ರಂದು ಯಾದಗಿರಿ ಜಿಲ್ಲೆಯ ಕೊಡೇಕಲ್ ನೀರಾವರಿ, ಕುಡಿಯುವ ನೀರಿನ ಘಟಕಗಳು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಸೇರಿ ವಿವಿಧ ಅಭಿವೃದ್ದಿ ಯೋಜನೆಗಳ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮುದಗಲ್ ಮಂಡಲ ಅಧ್ಯಕ್ಷ ಸಣ್ಣ ಸಿದ್ದಯ್ಯ ಮೇಗಳಪೇಟೆ, ಗುರುಬಸಪ್ಪ ಸಜ್ಜನ್, ಅಬ್ದುಲ್ ಬೇಕರಿ, ಗಿರಿಮಲ್ಲನಗೌಡ, ದ್ಯಾಮಣ್ಣ ನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.