ಸಿಂಧನೂರು: ತಾಲ್ಲೂಕಿನ ಬಂಗಾರಿ ಕ್ಯಾಂಪಿನ ಸಿದ್ಧಾಶ್ರಮ ಹಾಗೂ ಅನ್ನಪೂರ್ಣೇಶ್ವರಿ ಜನಸೇವಾ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಗಣೇಶ ಗಾಯತ್ರಿ ದೇವಿಯ 8ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ಯ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವ ನಿಮಿತ್ಯ ಸಿದ್ಧಾಶ್ರಮದ ಸಿದ್ಧರಾಮೇಶ್ವರ ಶರಣರು ಹಾಗೂ ಸದಾನಂದ ಶರಣರು ಸಾನ್ನಿಧ್ಯದಲ್ಲಿ ಗುರುವಾರದಂದು ಸುದರ್ಶನ ಹೋಮ ಜರುಗಿತು.
ಕ್ಯಾಂಪಿನ ಯುವಕರಿಗಾಗಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿ ನೋಡುಗರನ್ನು ಆಕರ್ಷಿಸಿತು. ಮೂರು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಶುಕ್ರವಾರ ಗಣೇಶ-ಗಾಯತ್ರಿ ದೇವಿಯ ಮೂರ್ತಿಗಳನ್ನು ಉಚ್ಚಾಯದಲ್ಲಿ ಪ್ರತಿಷ್ಠಾಪಿಸಿ ಸಕಲ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.ಸಂಜೆ 5 ಗಂಟೆಗೆ ರಥೋತ್ಸವಕ್ಕೆ ಪೂಜೆ ಸಲ್ಲಿಸಿ, ಮಹಿಳೆಯರು ರಥ ಎಳೆದು ಸಂಭ್ರಮಿಸಿದರು.
ರಥೋತ್ಸವ ಮುಂದಕ್ಕೆ ಚಲಿಸುತ್ತಿದ್ದಂತೆ ಭಕ್ತರು ಉತ್ತತ್ತಿ ಎಳೆದು ಇಷ್ಟಾರ್ಥ ಈಡೇರಿಸುವಂತೆ ಶ್ರದ್ದಾಭಕ್ತಿಯಿಂದ ಪ್ರಾರ್ಥಿಸಿದರು. ರಥೋತ್ಸವದುದ್ದಕ್ಕೂ ಗಾಯತ್ರಿ ದೇವಿಯ ಜಯಘೋಷ ಮೊಳಗಿದವು.
ರಾಯಚೂರಿನ ಕಿಲ್ಲೆಬಹೃನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ, ರೌಡಕುಂದಾ ಸಂಸ್ಥಾನ ಹಿರೇಮಠದ ನಿಯೋಜಿತ ಪಟ್ಟಾಧಿಕಾರಿ ಶಿವಯೋಗಿ ದೇವರು, ಕರಿಬಸವನಗರದ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮಿ, ತುರ್ವಿಹಾಳ ಪುರವರ ಹಿರೇಮಠದ ಅಮರಗುಂಡ ಶಿವಾಚಾರ್ಯ ಸ್ವಾಮಿ, ಮಸ್ಕಿಯ ಗಚ್ಚಿನಮನಿ ಹಿರೇಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮಿ, ಬಂಗಾರಿಕ್ಯಾಂಪಿನ ಸಿದ್ದಾಶ್ರಮದ ಸಿದ್ಧರಾಮೇಶ್ವರ ಶರಣರು, ಸದಾನಂದ ಶರಣರು, ಬಸವರಾಜ ಹಿರೇಗೌಡರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಹಿರೇಗೌಡರ್, ಸಂತೋಷ ಅಂಗಡಿ, ಸಿದ್ದಪ್ಪ ಜೀನೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.