ADVERTISEMENT

‘ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗಿ’

ಕಾರ್ಯಕರ್ತರಿಗೆ ಶಾಸಕ‌ ಆರ್. ಬಸನಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಮೇ 2022, 12:30 IST
Last Updated 28 ಮೇ 2022, 12:30 IST
ಮಸ್ಕಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಾಮಾಜಿಕ ಜಾಲತಾಣದ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು
ಮಸ್ಕಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಾಮಾಜಿಕ ಜಾಲತಾಣದ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು   

ಮಸ್ಕಿ: ‘2023 ರಲ್ಲಿ ಬರುವ ಸಾರ್ವತ್ರಿಕ ಚುನಾವಣೆ ಎದುರಿಸಲು ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಈಗಿನಿಂದಲೇ ಸಿದ್ಧರಾಗಬೇಕು’ ಎಂದು ಶಾಸಕ‌ ಆರ್. ಬಸನಗೌಡ ಕರೆ ನೀಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೆ ತಂದ ಜನಪರ ಯೋಜನೆಗಳನ್ನು ಸಾಮಾಜಿಕ‌ ಜಾಲತಾಣದ ಮೂಲಕ ಜನರಿಗೆ ತಲುಪಿಸಿ ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೃಷ್ಣ ಡಿ.‌ಚಿಗರಿ, ಕಿಸಾನ್ ಸೆಲ್ ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ಪಂಪನಗೌಡ, ಡಾ. ನಾಗವೇಣಿ, ಸಾಮಾಜಿಕ ಜಾಲತಾಣದ ಸಂಚಾಲಕ ವೀರಭದ್ರಪ್ಪ ಕೋಠಾರಿ, ಪಕ್ಷದ ಮುಖಂಡರು ಇದ್ದರು.

ADVERTISEMENT

‘14ರೊಳಗೆ ಪುರಸಭೆ ಕಟ್ಟಡ ಉದ್ಘಾಟಿಸಿ’

‘ಮಸ್ಕಿಯ ಪುರಸಭೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಜೂನ್‌ 14 ರ ಒಳಗೆ ಉದ್ಘಾಟನೆ ಮಾಡದಿದ್ದರೆ ನಾನೇ ಉದ್ಘಾಟನೆ ಮಾಡುವೆ‘ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗಡವು ನೀಡಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,‘₹ 2 ಕೋಟಿ ವೆಚ್ಚದಲ್ಲಿ ಪುರಸಭೆ ನೂತನ ಕಟ್ಟಡ ನಿರ್ಮಿಸಿ ಒಂದು ವರ್ಷ ಮೇಲಾಗಿದೆ. ಇನ್ನೂ‌ ಬಾಡಿಗೆ ಕಟ್ಟಡದಲ್ಲಿ ಪುರಸಭೆ ನಡೆಯುತ್ತಿದೆ. ಪುರಸಭೆ ಹಾಗೂ ಹೈಟೆಕ್ ಗ್ರಂಥಾಲಯ ಕಟ್ಟಡ ಉದ್ಘಾಟನೆಗೆ ಸಮಯ ಕೊಡುವಂತೆ ಹಲವಾರು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಮೂರು ನಾಲ್ಕು ಬಾರಿ ದಿನಾಂಕ ನಿಗದಿ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ‘ ಎಂದರು.

‘ಪುರಸಭೆಗೆ ಸ್ವಂತ ಕಟ್ಟಡ ಇದ್ದರೂ ಅದರಲ್ಲಿ ಕಾರ್ಯಾರಂಭ ಮಾಡದೇ ತಿಂಗಳಿಗೆ ₹ 30 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ಹಾಳಾಗುತ್ತಿದೆ‘ ಎಂದರು.

‘ಕಟ್ಟಡಗಳ ಉದ್ಘಾಟನೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜೂನ್‌ 14 ರಂದು ಮತ್ತೆ ಸಮಯ ಕೊಟ್ಟಿದ್ದಾರೆ. ಜೂನ್‌ 14 ರಂದು ಕಟ್ಟಡ ಉದ್ಘಾಟನೆಯಾಗದಿದ್ದರೆ ಶಾಸಕನಾಗಿ ನಾನೇ ಉದ್ಘಾಟನೆ ಮಾಡುತ್ತೇನೆ‘ ಎಂದು ತಿಳಿಸಿದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಕಿಸಾನ್ ಸೆಲ್ ಅಧ್ಯಕ್ಷ ಮೈಬೂಬುಸಾಬ ಮುದ್ದಾಪೂರ,ಮಲ್ಲಯ್ಯ ಮುರಾರಿ, ಕೃಷ್ಣ ಚಿಗರಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.