ರಾಯಚೂರು: ಜಿಲ್ಲೆಯಲ್ಲಿ ಪ್ರತಿನಿತ್ಯ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತಿದ್ದ ಸರ್ಕಾರಿ ಬಸ್ ನಿಲ್ದಾಣಗಳು ಲಾಕ್ಡೌನ್ ದಿನಗಳನ್ನು ನೆನಪಿಸುತ್ತಿದ್ದು ಸಾರಿಗೆ ಸೇವೆಯಿಲ್ಲದೆ ಬಿಕೋ ಎನ್ನುತ್ತಿವೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ಆರಂಭಿಸಿರುವ ಸಂಚಾರ ಸೇವೆ ಸ್ಥಗಿತವು ಎರಡನೇ ಶನಿವಾರವೂ ಮುಂದುವರಿದಿದೆ. ಸಂಚಾರ ಸ್ಥಗಿತ ಮಾಹಿತಿ ವ್ಯಾಪಕವಾಗಿದ್ದರಿಂದ ಪ್ರಯಾಣಿಕರು ಬಸ್ ನಿಲ್ದಾಣದತ್ತ ಬರುತ್ತಿಲ್ಲ. ಆದರೆ ಖಾಸಗಿ ವಾಹನಗಳಿಗೆ ಒಳ್ಳೆಯ ಅವಕಾಶ ನಿರ್ಮಾಣವಾಗಿದ್ದು, ಪ್ರಯಾಣ ದರದ ಬಗ್ಗೆ ಚೌಕಾಸಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ರಾಯಚೂರು ಕೇಂದ್ರ ಬಸ್ ನಿಲ್ದಾಣ ಮುಂಭಾಗ ಖಾಸಗಿ ವಾಹನಗಳು ಸರದಿಯಲ್ಲಿ ಪ್ರಯಾಣಿಕರು ಕರೆದೊಯ್ಯುತ್ತಿರುವುದು ಕಂಡುಬಂತು. ಆದರೆ, ಮನಬಂದಂತೆ ಪ್ರಯಾಣದರ ಕೇಳುತ್ತಿರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಸಂಚರಿಸುವ ಅನಿವಾರ್ಯ ಇದ್ದವರು ಮಾತ್ರ ಕ್ರೂಸರ್, ಟೆಂಪೊಗಳಲ್ಲಿ ತೆರಳುತ್ತಿದ್ದಾರೆ.
ಖಾಸಗಿ ವಾಹನದಾರರು ರಾಯಚೂರಿನಿಂದ 60 ಕಿಲೋ ಮೀಟರ್ ದೂರದ ದೇವದುರ್ಗ ತಲುಪಿಸಲು ₹100, ಮಾನ್ವಿಗೆ ₹150, ಸಿಂಧನೂರಿಗೆ ₹200 ಹಾಗೂ ಗಂಗಾವತಿಗೆ ಸಂಚರಿಸುವುದಕ್ಕೆ ₹320 ಕೇಳುತ್ತಿರುವುದು ಕಂಡುಬಂತು. ಪ್ರಯಾಣಿಕರು ಚೌಕಾಸಿ ಮಾಡಿಕೊಂಡು ತೆರಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.