ADVERTISEMENT

ರಾಯಚೂರು | ಕೃತಕ ಜಲಕೃಷಿ: ಮನೆಯಲ್ಲಿ ತರಕಾರಿ ಬೆಳೆಸಿ

ಚಂದ್ರಕಾಂತ ಮಸಾನಿ
Published 9 ಡಿಸೆಂಬರ್ 2024, 6:02 IST
Last Updated 9 ಡಿಸೆಂಬರ್ 2024, 6:02 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾದ ಮನೆಯಲ್ಲೇ ತರಕಾರಿ ಬೆಳೆಯಬಹುದಾದ ಘಟಕದೊಂದಿಗೆ ಶಂಕರ ವಾಘಮಾರೆ
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾದ ಮನೆಯಲ್ಲೇ ತರಕಾರಿ ಬೆಳೆಯಬಹುದಾದ ಘಟಕದೊಂದಿಗೆ ಶಂಕರ ವಾಘಮಾರೆ   

ರಾಯಚೂರು: ಕೃತಕ ಜಲ ಕೃಷಿ ತಂತ್ರಜ್ಞಾನದ ನೆರವಿನೊಂದಿಗೆ ಮನೆಯಲ್ಲೇ ಹಲವು ಬಗೆಯ ತರಕಾರಿ ಬೆಳೆಸುವ ಹೊಸ ತಂತ್ರವನ್ನು ರಾಯಚೂರು ತಾಲ್ಲೂಕಿನ ಅಸ್ಕಿಹಾಳದ ಶಂಕರ ವಾಘಮಾರೆ ಕಂಡು ಹಿಡಿದ್ದಾರೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಶಂಕರ ವಾಘಮಾರೆ ಅವರು ತಮ್ಮದೇ ಆದ್‌ ಸ್ಟಾರ್ಟ್‌ಆಪ್‌ ಆರಂಭಿಸಿ ಜನರು ಮನೆಯಲ್ಲೇ ತಾಜಾ ತರಕಾರಿ ಬೆಳೆದು ಅದನ್ನು ಬಳಸುವಂತೆ ಮಾಡಲು ಉಪಕರಣವೊಂದನ್ನು ಸಿದ್ಧಪಡಿಸಿದ್ದಾರೆ.

ಹೌದು! ಹೈದರಾಬಾದ್‌ನ ಕಂಪನಿ ನೆರವಿನೊಂದಿ ತರಕಾರಿ ಬೆಳೆಸುವ ಘಟಕ ನಿರ್ಮಿಸಿದ್ದಾರೆ. ಇದು ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದ್ದು, ಒಳಗೆ ಹುಲ್ಲು ಅಳವಡಿಸಿ ನಮಗೆ ಬೇಕಿರುವ ತರಕಾರಿ ಸಸಿ ಬೆಳೆಸಿ ಅದರ ಕುಣಿಕೆಗಳಲ್ಲಿ ಇಟ್ಟು ನಿತ್ಯ ನೀರು ಹಾಕಿದರೆ ಸಾಕು ತರಕಾರಿ ಬೆಳೆಯಲು ಶುರುವಾಗುತ್ತದೆ. ಇದಕ್ಕೆ ಮಣ್ಣಿನ ಅಗತ್ಯವೂ ಇಲ್ಲ.

ADVERTISEMENT

ಘಟಕದಲ್ಲಿ ಒಂದು ಮೋಟರ್‌ ಇಟ್ಟು ಅದಕ್ಕೆ ಟೈಮರ್‌ ಅಳವಡಿಸಲಾಗಿದೆ. ಟಬ್‌ನಲ್ಲಿ ನೀರು ಹಾಕಿ ಮೋಟರ್‌ ಕಂಟ್ರೋಲ್‌ ಡಿವೈಸ್‌ನಲ್ಲಿ ಸೆಟ್‌ ಮಾಡಲಾಗಿದೆ. ಒಳಗಡೆ ನೀರಿನ ಅಂಶ ಕಡಿಮೆಯಾಗದಂತೆ ಅದು ಆಟೊಮೆಟಿಕ್‌ ಆಗಿ ಆನ್‌ ಆರಂಭವಾಗುತ್ತದೆ. ನೀರು ಚಿಮ್ಮಿದ ಮೇಲೆ ಕೆಲಹೊತ್ತಿನಲ್ಲಿ ತಾನಾಗಿಯೇ ಆಫ್‌ ಆಗುತ್ತದೆ. ಹೀಗಾಗಿ ಇದರಲ್ಲಿ ತರಕಾರಿ ಗಿಡಗಳೂ ಸಮೃದ್ಧವಾಗಿ ಬೆಳೆಯುತ್ತವೆ.

ತಾರಸಿ ಹಾಗೂ ಬಹುಮಹಡಿ ಕಟ್ಟಡಗಳ ಮೇಲೆ ಅಥವಾ ಮನೆಯ ಗ್ಯಾಲರಿಯಲ್ಲಿ 4 X4 ಚದರಡಿ ಜಾಗವಿದ್ದರೂ ಸಾಕು. ತರಕಾರಿ ಬೆಳೆಯಬಹುದಾಗಿದೆ. ಇವರು ಮನೆಯಲ್ಲೇ ಪ್ರಯೋಗ ಮಾಡಿ ಯಶಸ್ವಿಯಾದ ನಂತರ ಹೊಸ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಮನೆಯಲ್ಲಿ ತರಕಾರಿ ಬೆಳೆಸಲು ಇಚ್ಚಿಸುವವರು ₹ 15 ಸಾವಿರ ವೆಚ್ಚದ ಒಂದು ಯುನಿಟ್‌ ಖರೀದಿಸಿದರೆ ಸಾಕು. ಅದರ ನಿರ್ವಹಣೆಯ ಮಾಹಿತಿಯನ್ನು ಶಂಕರ ವಾಘಮಾರೆ ಅವರೇ ಕೊಡುತ್ತಾರೆ.

‘ಬೇರೆ ಪ್ಲಾಸ್ಟಿಕ್‌ ಕಂಪನಿಗಳು ಸುಲಭವಾಗಿ ನಕಲು ಮಾಡದಂತೆ ಘಟಕವನ್ನು ತಯಾರಿಸಲಾಗಿದೆ. ಇದಕ್ಕೆ ಬೇಡಿಕೆಯೂ ಇದೆ. ಮನೆಯಲ್ಲಿ ತರಕಾರಿ ಬೆಳೆದರೆ ನಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಳ್ಳಬಹುದು. ಇದು ನಗರ ಪ್ರದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿದೆ‘ ಎಂದು ಉದ್ಯಮಿ ಶಂಕರ ವಾಘಮಾರೆ ತಿಳಿಸಿದರು.

‘ರಾಯಚೂರು ತಾಲ್ಲೂಕಿನ ಅಸ್ಕಿಹಾಳದಲ್ಲಿ ಶ್ರೀನಂದಾಶಂಕರ ಅವರ ಜೈನ್‌ ಇರಿಗೇಷನ್‌ ಸಿಸ್ಟಮ್‌ ಲಿಮಿಟೆಡ್‌ ಅಡಿಯಲ್ಲಿ ಹೈಟೆಕ್‌ ನೀರಾವರಿ, ಹೈಡ್ರೋಫೋನಿಕ್ಸ್, ರೂಫ್ ಟಾಪ್‌ ಸೋಲಾರ್‌ ಸಿಸ್ಟಮ್‌, ಸೋಲಾರ್‌ ಪಂಪ್‌ಸೆಟ್‌ ಸಹ ನಮ್ಮ ಬಳಿ ಇವೆ. ರೈತರಿಗಷ್ಟೇ ಅಲ್ಲ. ಜನ ಸಾಮಾನ್ಯವರಿಗೂ ಅನುಕೂಲ ಮಾಡಿಕೊಡಲು ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ‘ ಎಂದು ಹೇಳಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾದ ಮನೆಯಲ್ಲೇ ತರಕಾರಿ ಬೆಳೆಯಬಹುದಾದ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.