ADVERTISEMENT

ಹಟ್ಟಿ ಚಿನ್ನದ ಗಣಿ: ಬರಗಾಲದಲ್ಲಿ ಆಸರೆಯಾದ ‘ಖಾತ್ರಿ’

ಕೋಠಾ ಗ್ರಾಮ ಪಂಚಾಯಿತಿ: ಅರ್ಜಿ ಹಾಕಿದ 530 ಕೂಲಿಕಾರರು ಕೆಲಸ

ಅಮರೇಶ ನಾಯಕ
Published 25 ಏಪ್ರಿಲ್ 2024, 6:14 IST
Last Updated 25 ಏಪ್ರಿಲ್ 2024, 6:14 IST
ಹಟ್ಟಿಚಿನ್ನದಗಣಿ ಸಮೀಪದ ಕೋಠಾದ ಬಳಿ ಹಳ್ಳದ ಹೂಳೆತ್ತುವ ಕಾಮಗಾರಿ ನಡೆಯುತ್ತಿರುವುದು
ಹಟ್ಟಿಚಿನ್ನದಗಣಿ ಸಮೀಪದ ಕೋಠಾದ ಬಳಿ ಹಳ್ಳದ ಹೂಳೆತ್ತುವ ಕಾಮಗಾರಿ ನಡೆಯುತ್ತಿರುವುದು   

ಹಟ್ಟಿ ಚಿನ್ನದ ಗಣಿ: ಬರಗಾಲದಲ್ಲಿ ಕೆಲಸವಿಲ್ಲದೆ ಮಹಾನಗರಗಳಿಗೆ ಗುಳೆ ಹೋಗುವಂಥ ಪರಿಸ್ಥಿತಿ ಎದುರಿಸುತ್ತಿದ್ದ ಕೋಠಾ ಗ್ರಾ.ಪಂ ವ್ಯಾಪ್ತಿಯ ಕೋಠಾ ಹಾಗೂ ಮೇದಿನಾಪುರ ಗ್ರಾಮಗಳ ಜನರಿಗೆ ಉದ್ಯೋಗ ಖಾತ್ರಿ ಕೆಲಸ ಆಸರೆಯಾಗಿದೆ.

ಕೋಠಾ ಗ್ರಾ.ಪಂ ಆಡಳಿತ ಗ್ರಾಮದ ಬಳಿ ಗೌಡೂರು ಹಳ್ಳದ ಹೂಳೆತ್ತುವ ಕಾಮಗಾರಿಯನ್ನು ಕೂಲಿಕಾರರಿಗೆ ಕೆಲಸ ಕೊಡುವ ಉದ್ದೇಶದಿಂದ ಆರಂಭಿಸಿದೆ. ಅರ್ಜಿ ಹಾಕಿದ 530 ಕೂಲಿಕಾರರು ಕೆಲಸಕ್ಕೆ ಬರುತ್ತಿದ್ದಾರೆ. ಕಳೆದ ಒಂದು ವಾರದಿಂದ ಕೆಲಸ ನಡೆಯುತ್ತಿದೆ.

ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಬರಗಾಲ ಉಂಟಾಗಿ ದುಡಿಮೆ ಇಲ್ಲದೆ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಜನತೆಗೆ ಉದ್ಯೋಗ ಖಾತ್ರಿ ಕೆಲಸ ವರವಾಗಿ ಪರಿಣಮಿಸಿದೆ. ಒಂದು ವೇಳೆ ಖಾತ್ರಿಯಲ್ಲಿ ಕೆಲಸ ಕೊಡದಿದ್ದರೆ ಬಹುತೇಕ ಜನರು ಬೆಂಗಳೂರಿನಂಥ ಮಹಾನಗರಗಳಿಗೆ ಗುಳೆ ಹೋಗಬೇಕಾಗಿತ್ತು.

ADVERTISEMENT

ಮಳೆಗಾಲ ಆರಂಭವಾಗಿ ಕೃಷಿ ಚಟುವಟಿಕೆಗಳು ನಡೆಯುವವರೆಗೆ ಖಾತ್ರಿ ಕೆಲಸ ಕೂಲಿಕಾರರಿಗೆ ಸಹಕಾರಿಯಾಗಲಿದೆ. ಮಾಡಿದ ಕೆಲಸಕ್ಕೆ ಸಮರ್ಪಕವಾಗಿ, ಆದಷ್ಟು ಶೀಘ್ರದಲ್ಲಿ ಕೂಲಿ ಪಾವತಿಸಲು ಗ್ರಾ.ಪಂ. ಆಡಳಿತ ಕ್ರಮಕೈಗೊಳ್ಳಬೇಕು ಎಂದು ಕೂಲಿಕಾರರು ಒತ್ತಾಯಿಸಿದ್ದಾರೆ.

ಉದ್ಯೋಗ ಖಾತ್ರಿ ಕೆಲಸದಲ್ಲಿ ಕಾಯ್ದೆ ಪ್ರಕಾರ ದಿನಗೂಲಿ ₹349 ಕೊಡಬೇಕು, ಕೋಠಾ ಗ್ರಾ.ಪಂ ಅಧಿಕಾರಿಗಳು ₹249 ಕೂಲಿ ಕೊಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಕೂಲಿಕಾರರಿಗೆ ಅನುಕೂಲವಾಗಲಿ ಹಾಗೂ ಅವರು ಬೇರೆ ಊರುಗಳಿಗೆ ದುಡಿಯಲು ಹೋಗಬಾರದೆಂದು ಖಾತ್ರಿ ಕೆಲಸವನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದು ಕೆಲಸ ಕೊಡಲಾಗುತ್ತಿದೆ. ಹೀಗಾಗಿ ಕಾಯ್ದೆ ಪ್ರಕಾರವೇ ದಿನಗೂಲಿ ಕೊಡಬೇಕು ಎಂದು ಮಲ್ಲೇಶ ಮ್ಯಾಗೇರಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಒತ್ತಾಯಿಸಿದರು.

ಕೋಠಾ ಗ್ರಾಮದ 530 ಜನರಿಗೆ ಉದ್ಯೋಗ ಖಾತ್ರಿಯಲ್ಲಿ ಕಳೆದ ಏಳು ದಿನಗಳಿಂದ ಕೆಲಸ ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ನೀರು ಮಕ್ಕಳಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ದಿನಗೂಲಿಯನ್ನು ಕೆಲಸದ ಆಧಾರದ ಮೇಲೆ ಎಂಜಿನಿಯರ್ ನಿರ್ಧರಿಸುತ್ತಾರೆ

-ಗಂಗಮ್ಮ ಪಿಡಿಒ ಕೋಠಾ ಗ್ರಾ.ಪಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.