ADVERTISEMENT

ಯುವಜನತೆ ನಿಜವಾದ ಇತಿಹಾಸ ತಿಳಿದುಕೊಳ್ಳಿ: ನಿಕೇತ್ ರಾಜ್ ಮೌರ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 13:46 IST
Last Updated 14 ಜನವರಿ 2022, 13:46 IST
ತಿಂಥಣಿ ಬ್ರಿಜ್‌ ಕಲಬುರಗಿ ವಿಭಾಗದ ಕನಕ ಗುರು‌ಪೀಠದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ಕೊನೆಯ ದಿನದಂದು ರಾಜ್ಯ ಕುರುಬ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಯುವ ಜನ ಸಮಾವೇಶದಲ್ಲಿ ರಾಜ್ಯ ಕುರುಬ ಸಮಾಜದ ಯುವ ಮುಖಂಡ ನಿಕೇತ್ ರಾಜ್ ಮೌರ್ಯ ಮಾತನಾಡಿದರು 
ತಿಂಥಣಿ ಬ್ರಿಜ್‌ ಕಲಬುರಗಿ ವಿಭಾಗದ ಕನಕ ಗುರು‌ಪೀಠದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ಕೊನೆಯ ದಿನದಂದು ರಾಜ್ಯ ಕುರುಬ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಯುವ ಜನ ಸಮಾವೇಶದಲ್ಲಿ ರಾಜ್ಯ ಕುರುಬ ಸಮಾಜದ ಯುವ ಮುಖಂಡ ನಿಕೇತ್ ರಾಜ್ ಮೌರ್ಯ ಮಾತನಾಡಿದರು    

ಜಾಲಹಳ್ಳಿ: ದೇಶ ಹಾಗೂ ರಾಜ್ಯದ ಯುವ ಜನತೆ ನಿಜವಾದ ಇತಿಹಾಸ ತಿಳಿದುಕೊಳ್ಳದೇ ಇದ್ದರೆ, ತುಂಬಾ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ ಎಂದು ರಾಜ್ಯ ಕುರುಬ ಸಮಾಜದ ಯುವ ಮುಖಂಡ ನಿಕೇತ್ ರಾಜ್ ಮೌರ್ಯ ಹೇಳಿದರು.

ತಿಂಥಣಿ ಬ್ರಿಜ್‌ ಕಲಬುರಗಿ ವಿಭಾಗದ ಕನಕ ಗುರು‌ಪೀಠದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ಕೊನೆಯ ದಿನದಂದು ರಾಜ್ಯ ಕುರುಬ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಯುವ ಜನ ಸಮಾವೇಶದಲ್ಲಿ ಮಾತನಾಡಿದರು.

ಈ ದೇಶವು 70 ವರ್ಷದ ಹಿಂದೆ 563 ರಾಜ ಸಂಸ್ಧಾನಗಳಲ್ಲಿ ಹರಿದು ಹಂಚಿಹೋಗಿತ್ತು. ತಿನ್ನಲು ಅನ್ನ ಇರಲಿಲ್ಲ. ಮೈಮುಚ್ಚಿಕೊಳ್ಳಲು ಬಟ್ಟೆ ಇರಲ್ಲಿಲ್ಲ. ಅಂತಹ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಪಡೆದುಕೊಂಡ ಅಂದಿನ ನಾಯಕರು, ದೇಶ ಕಟ್ಟಲು ಪಡಾಬಾರದ ಕಷ್ಟಪಟ್ಟಿದ್ದಾರೆ. ಅದರೆ, ಈಗಿನ ರಾಜಕೀಯ ನಾಯಕರನ್ನು ನೋಡಿ, ಅವರ ಜೀವನ ಶೈಲಿ ನೋಡಿ ಅರ್ಥವಾಗುತ್ತದೆ ಎಂದರು.

ADVERTISEMENT

ಬಡವರ ಕಷ್ಟ ದೂರವಾಗಬೇಕಾದರೆ, ಶ್ರೀಮಂತರನ್ನು ಬಿಟ್ಟು ವಿಧಾನಸಭೆ ಹಾಗೂ ಲೋಕಾಸಭೆಯಲ್ಲಿ ಸಾಮಾನ್ಯ ಬಡವರನ್ನು ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆ ಮಾಡಬೇಕು. ಇಂಥವರು ಮಾತ್ರ ಬಡವರ ಬಗ್ಗೆ ಅಲ್ಲಿ ಮಾತನಾಡಲು ಸಾಧ್ಯ. ಅದರೆ, ಈ ಎರಡು ಸದನಗಳಲ್ಲಿ ಅಕ್ರಮ ದಂಧೆಕೋರರೆ ಹೆಚ್ಚಾಗಿದ್ದಾರೆ ಎಂದು ದೂರಿದರು.

ಈ ಹಿಂದೆ ಸಾಮಾನ್ಯ ಬಡ ತಂದೆ, ತಾಯಂದಿರು ತಮ್ಮ ಮಕ್ಕಳು ತಾವು ಮಾಡುವ ಕೆಲಸವನ್ನೆ ಇನ್ನೂ ಸ್ವಲ್ಪ‌ ಸುಧಾರಿತ ರೀತಿಯಲ್ಲಿ‌ ಮಾಡಲಿ ಎಂದು ಬಯಸುತ್ತಿದ್ದರು. ಅ ಸ್ಥಿತಿಯಿಂದ ಈಗಿನ ಪಾಲಕರು ತಮ್ಮ ಮಕ್ಕಳನ್ನು ದೇಶದ ಪ್ರಧಾನಿ ಪಟ್ಟ ಪಡೆಯುವಂತೆ ಕನಸು ಕಾಣ ಸಾಧ್ಯವಾಗಿದ್ದರೆ, ಅದೂ ಈ ದೇಶಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಸಾಧ್ಯವಾಗಿದೆ. ಅದರೆ, ಅ ಸಂವಿಧಾನವೇ ಬದಲಿಸುವ ಮಾತುಗಳನ್ನು ಆಡುವ ಜನ ನಮ್ಮನ್ನು ಆಳುತ್ತಿದ್ದಾರೆ. ಅದನ್ನು ಯುವಕರು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ರಾಯಣ್ಣ ಯುವ ಪಡೆಯ ಅಧ್ಯಕ್ಷ ಮೊಹನ್ ಮೇಟಿ ಮಾತನಾಡಿ, ಸಂಘಟನೆಗಳನ್ನು ಉತ್ತಮವಾಗಿ ಮಾಡಬೇಕಿದೆ. ಭೂಮಿ ಹದವಾದರೆ ಉಪಯೋಗವಿಲ್ಲ, ಗುಣಮಟ್ಟದ ಬೀಜ ಬೇಕು. ಅದರ ಜೊತೆಗೆ‌ ಕಳೆ ಬಾರದಂತೆ ನೋಡಿಕೊಳ್ಳಬೇಕಾಗಿದೆ. ಇದರಿಂದ ಮಾತ್ರ ಉತ್ತಮ ಬೆಳೆ ತೆಗೆಯಲು ಸಾಧ್ಯ ಮುಂದಿನ ದಿನಗಳಲ್ಲಿ ಹಾಲುಮತ ಸಮಾಜದ ಸ್ವಾಮೀಜಿಗಳು ಅ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಸಿದ್ದರಾಮಾನಂದಪುರಿ ಸ್ವಾಮೀಜಿ, ಈಶ್ವರನಂದಪುರಿ ಸ್ವಾಮೀಜಿ, ಶಿವನಂದಪುರಿ ಸ್ವಾಮೀಜಿ, ಯೋಗೇಶ್ವರಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಹಾಲುಮತ ಸಮಾಜದ ಮುಖಂಡರಾದ ಅಮೃತ ರಾವ್ ಚಿಮ್ಕೋಡೆ, ಕೆ.ಬಸವಂತಪ್ಪ, ಕೆ.ಸುಬ್ಬಣ್ಣ, ಮಾನವಿ ದೇವಿಂದ್ರಪ್ಪ, ರುದ್ರಣ್ಣ ಗುಳಿಗುಳಿ, ರಾಜಶೇಖರ ದೊಡ್ಡಣ್ಣ, ಯಲ್ಲಪ್ಪ ಹೆಡಹಳ್ಳಿ, ರಾಜು ಕಂಬಗಿ, ಬಿ.ಎಂ ಪಾಟೀಲ ಸೇರಿದಂತೆ ಅನೇಕರು ಇದ್ದರು. ನಿರೂಪಾದಪ್ಪ ಗುಡಿಹಾಳ್, ಮಹಾತೇಶ ಕೌಲಗಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.