ಮಸ್ಕಿ: ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಆರಂಭವಾದ ಭಾರಿ ಮಳೆ ಶನಿವಾರವೂ ಮುಂದುವರಿದಿದೆ. ತಾಲ್ಲೂಕಿನ ಮಸ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿರುವ ಕಾರಣ ಶನಿವಾರ ಬೆಳಿಗ್ಗೆಯಿಂದಲೇ ಮೂರು ಗೇಟ್ಗಳ ಮೂಲಕ ಹೆಚ್ಚಿನ ಪ್ರಮಾಣದ ನೀರನ್ನು ಮಸ್ಕಿಯ ಹಿರೇಹಳ್ಳಕ್ಕೆ ಬಿಡಲಾಗಿದೆ.
ಹಳ್ಳ ತುಂಬಿ ಹರಿಯುತ್ತಿದೆ. ಪ್ರವಾಹದ ಭೀತಿ ಉಂಟಾಗಿದೆ. ಹಳ್ಳದ ದಂಡೆಯ ಗ್ರಾಮಸ್ಥರಿಗೆ ಹಳ್ಳಕ್ಕೆ ಇಳಿಯದಂತೆ ಶನಿವಾರ ಬೆಳಿಗ್ಗೆಯಿಂದಲೇ ಎಚ್ಚರಿಕೆ ನೀಡಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ಭೋಗಾವತಿ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.
ಮಳೆಗೆ ತಾಲ್ಲೂಕಿನ ವಿವಿಧೆಡೆ 15ಕ್ಕೂ ಹೆಚ್ಚು ಮನೆಗಳು ಕುಸಿದಿವೆ. 450 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮಳೆ ನಿಂತ ಕೂಡಲೇ ನಷ್ಟದ ಅಂದಾಜು ಮಾಡಲಾಗುವುದು ಎಂದು ತಹಶೀಲ್ದಾರ್ ಅವರು ಹೇಳಿದ್ದಾರೆ.
ಬೆಟ್ಟದಿಂದ ಹರಿದು ಬಂದ ಮಳೆ ನೀರು ಬಸವೇಶ್ವರ ನಗರಕ್ಕೆ ನುಗ್ಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ತಹಶೀಲ್ದಾರ್ ಕಚೇರಿ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಕೆರೆಯಂತಾಗಿದೆ. ಬಸವೇಶ್ವರ ನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮುಂದೆ ಹರಿದು ಹೋಗದೆ ನಿಂತಲ್ಲಿಯೇ ನಿಂತಿದ್ದರಿಂದ ಸ್ಥಳೀಯ ನಿವಾಸಿಗಳು ಬೆಳಿಗ್ಗೆ ನಿತ್ಯದ ಕೆಲಸಗಳಿಗೆ ಪರದಾಡುವಂತಾಯಿತು. ಮನೆಗಳಿಂದ ಹೊರಬಾರದಂಥ ವಾತಾವರಣ ನಿರ್ಮಾಣವಾಗಿತ್ತು.
ರೇಣುಕಾಚಾರ್ಯ ನಗರದ ರಸ್ತೆಯಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡಿದರು. ವಾಲ್ಮೀಕಿ ನಗರ, ಸೋಮನಾಥ ನಗರ, ಗಾಂಧಿ ನಗರ ಸೇರಿದಂತೆ ವಿವಿಧ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ.
ಹೆದ್ದಾರಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾದ ಕಾರಣ ಪುರಸಭೆ ಸಿಬ್ಬಂದಿ ಚರಂಡಿಗಳನ್ನು ಸ್ವಚ್ಛ ಮಾಡಿ ನೀರು ಹೋಗುವಂತೆ ಮಾಡುತ್ತಿರುವುದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.