ರಾಯಚೂರು: ರಾಷ್ಟ್ರೀಯ ಸೇವಾ ಯೋಜನೆಯಿಂದ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲ ಉದ್ದೇಶ, ಹಳ್ಳಿಯ ಜೀವನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದಾಗಿದೆ. ಗ್ರಾಮೀಣ ಜನರಿಂದ ಅತಿಥಿಗಳಿಗೆ ದೊರೆಯುವ ಅತಿಥಿ ಸತ್ಕಾರ ವಿಶೇಷವಾಗಿರುತ್ತದೆ. ಇದು ನಮ್ಮ ನಗರ ಜೀವನನದಲ್ಲಿ ನೋಡಲು ಸಿಗುವುದಿಲ್ಲ ಎಂದು ಟಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಕೆ.ಅಮರೇಶ ಹೇಳಿದರು.
ತಾಲ್ಲೂಕಿನ ಬೂರ್ದಿಪಾಡ ಗ್ರಾಮದಲ್ಲಿ ರಾಯಚೂರಿನ ಸೀತಾ ಸುಬ್ಬರಾಜು ಸ್ಮಾರಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಿಶೇಷ ಶಿಬಿರ ಹಾಗೂ ಯುನಿಸೆಫ್ ಪ್ರಾಯೋಜಿತ ಲಸಿಕಾಕರಣ ಪೋಷಣಾ ಅಭಿಯಾನ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿಯ ಜನರಲ್ಲಿರುವ ಸಹಜ ಜೀವನಶೈಲಿ, ಪ್ರಾಂಜಲ ಮನಸ್ಸು, ನಿಸ್ವಾರ್ಥ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಒಳ್ಳೆಯ ಸಂಸ್ಕಾರಗಳು ನಗರದಲ್ಲಿ ಕಾಣಸಿಗುವುದಿಲ್ಲ. ಹಳ್ಳಿಯ ಪರಿಸರಕ್ಕೆ ಪೂರಕವಾಗಿ ಜೀವನ ನೋಡಿ ಕಲಿಯುವುದು ಸಾಕಷ್ಟು ಇದೆ. ಆದ್ದರಿಂದ ವಿದ್ಯಾರ್ಥಿಗಳು ಹಳ್ಳಿಯ ಜನರೊಂದಿಗೆ ಬೆರೆತು ಅವರಲ್ಲಿರುವ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಹೇಳಿದರು.
ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ದೊಡ್ಡ ರಂಗಪ್ಪರವರು ಮಾತನಾಡಿ, ವಿದ್ಯಾರ್ಥಿಗಳು ಈ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಕ್ರೀಯಾಶೀಲವಾಗಿ, ನಿಸ್ವಾರ್ಥ ರೀತಿಯಿಂದ ಸೇವೆ ಮಾಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಅಲ್ಲದೇ, ತಮ್ಮೊಳಗೆ ಪರಸ್ಪರ ಬೇಧಭಾವಗಳನ್ನು ಮಾಡದೇ ಅನ್ಯೋನ್ಯತೆಯಿಂದ ಹಾಗೂ ಪ್ರೀತಿಯಿಂದ ಜೀವಿಸುವುದನ್ನು ಕಲಿಯಬೇಕು ಎಂದು ತಿಳಿಸಿದರು.
ಮಾಜಿ ಎಸ್ಡಿಎಂಸಿ ಅಧ್ಯಕ್ಷ ತಿರುಮಲರೆಡ್ಡಿ ಮಾತನಾಡಿ, ‘ನಮ್ಮ ಗ್ರಾಮದ ಜನರು ಹಾಗೂ ಶಾಲೆಯ ಶಿಕ್ಷಕರ ಸಹಕಾರದಿಂದ ಅನೇಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಆ ಮೂಲಕ ಬುರ್ದಿಪಾಡ ಗ್ರಾಮ ಒಳ್ಳೆಯ ಗ್ರಾಮ ಎಂದು ಹೆಸರು ಪಡೆದಿದೆ. ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ನಮ್ಮ ಗ್ರಾಮದಲ್ಲಿ ಹಮ್ಮಿಕೊಂಡಿರುವುದು ನಮಗೆಲ್ಲ ಸಂತಸವನ್ನುಂಟು ಮಾಡಿದೆ’ ಎಂದರು.
ಉಮೇಶ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಬದುಕಪ್ಪ ಇದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಿದ್ದಲಿಂಗಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಮಹಾರಾಜ ಪ್ರಾರ್ಥಿಸಿದರು. ಎನ್.ಎಸ್.ಎಸ್. ಅಧಿಕಾರಿ ಶ್ರೀನಿವಾಸ ರಾಯಚೂರಕರ್ ಸ್ವಾಗತಿಸಿದರು. ಉಪನಾಸಕ ಅಳ್ಳಪ್ಪ ನಿರೂಪಿಸಿದರು. ಉಪನ್ಯಾಸಕ ರವಿಕುಮಾರ ವಂದಿಸಿದರು.
ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಬಸವರಾಜಪ್ಪ, ಉಪನ್ಯಾಸಕರಾದ, ಬಸವರಾಜ ಕೆ., ವೆಂಕಟೇಶ ಪಿ., ಪ್ರಭುದೇವ, ವಿಜಯಲಕ್ಷ್ಮೀ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.