ADVERTISEMENT

ಕ್ರೀಡಾಂಗಣ ವಂಚಿತ ಹುಲಸೂರ ತಾಲ್ಲೂಕು

ಕ್ರೀಡಾಪಟುಗಳ ಅಭ್ಯಾಸ, ಕ್ರೀಡಾಕೂಟ ಆಯೋಜನೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 5:45 IST
Last Updated 24 ಜನವರಿ 2026, 5:45 IST
ಹುಲಸೂರ ತಾಲ್ಲೂಕಿನ ಶಾಲೆಯೊಂದರ ಮೈದಾನದಲ್ಲಿ ಮೂಲಸೌಕರ್ಯವಿಲ್ಲದೆ ಕಬಡ್ಡಿ ಅಭ್ಯಾಸ ನಡೆಸುತ್ತಿರುವ ಮಕ್ಕಳು
ಹುಲಸೂರ ತಾಲ್ಲೂಕಿನ ಶಾಲೆಯೊಂದರ ಮೈದಾನದಲ್ಲಿ ಮೂಲಸೌಕರ್ಯವಿಲ್ಲದೆ ಕಬಡ್ಡಿ ಅಭ್ಯಾಸ ನಡೆಸುತ್ತಿರುವ ಮಕ್ಕಳು   

ಹುಲಸೂರ: ತಾಲ್ಲೂಕು ರಚನೆಯಾಗಿ ಎಂಟು ವರ್ಷ ಕಳೆದರೂ ಇನ್ನೂ ಕ್ರೀಡಾಂಗಣಕ್ಕೆ ಜಾಗ ಗುರುತಿಸಿಲ್ಲ. ಕಮಲನಗರ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ಇಂದಿಗೂ ಬಸವಕಲ್ಯಾಣ ತಾಲ್ಲೂಕು ಕ್ರೀಡಾಂಗಣದಲ್ಲಿಯೇ ನಡೆಯುತ್ತಿವೆ.

ತಾಲ್ಲೂಕಿನ ಕ್ರೀಡಾಪಟುಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ರೀಡಾಕೂಟಗಳ ಆಯೋಜನೆ, ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಸಮಾರಂಭಗಳು, ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಶಾಲಾ ಕಾಲೇಜುಗಳ ಮೈದಾನಗಳೇ ಅನಿವಾರ್ಯವಾಗಿವೆ.

ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲದೆ ಕ್ರೀಡಾಪಟುಗಳ ಅಭ್ಯಾಸ ಹಾಗೂ ಶಾಲೆ–ಕಾಲೇಜು ಕ್ರೀಡಾಕೂಟ ಆಯೋಜನೆಗೆ ಅಡ್ಡಿಯಾಗಿದೆ. ಮಳೆಗಾಲದಲ್ಲಂತೂ ಶಾಲೆಯಲ್ಲಿರುವ ಮೈದಾನ ಕೆಸರು ಗದ್ದೆಯಂತೆ ಆಗುತ್ತದೆ. ಆಗ ಮೈದಾನಕ್ಕೆ ಕಾಲಿಡುವುದು ಕಷ್ಟ ಹೀಗಾಗಿ ಕ್ರೀಡಾಪಟುಗಳು, ಕ್ರೀಡಾಸಕ್ತರು, ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ADVERTISEMENT

ತಾಲ್ಲೂಕಿನಲ್ಲಿ 4 ಸರ್ಕಾರಿ ಪ್ರೌಢಶಾಲೆಗಳು , 4 ಅನುದಾನಿತ ಪ್ರೌಢ ಶಾಲೆಗಳಿದ್ದು , 27 ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಪ್ರೌಢಶಾಲಾ ವಿಭಾಗದಲ್ಲಿ 1,098 ಪ್ರಾಥಮಿಕ ವಿಭಾಗದಲ್ಲಿ 3,895 ವಿದ್ಯಾರ್ಥಿಗಳು ತಾಲ್ಲೂಕಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಕೂಟ ವೇಳೆ ಕಬಡ್ಡಿ, ಕೊಕ್ಕೊ, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್, ಥ್ರೋಬಾಲ್ ಅನ್ನು ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಯ ಮೈದಾನದಲ್ಲೇ ಆಡಿಸಲಾಗುತ್ತಿದೆ. ‘ಉದ್ದ ಜಿಗಿತ ಎತ್ತರ ಜಿಗಿತಕ್ಕೆ ಪ್ರತ್ಯೇಕ ಜಾಗವಿಲ್ಲದೆ ಕ್ರೀಡಾಕೂಟ ಆರಂಭದ ಎರಡು ದಿನ ಮುನ್ನ ತಾತ್ಕಾಲಿಕವಾಗಿ ಮೈದಾನ ಸಿದ್ಧಪಡಿಸಬೇಕು. ನಂತರ ಅದನ್ನು ಮುಚ್ಚಬೇಕು. ಎತ್ತರ ಜಿಗಿತಕ್ಕೆ ಹಾಸಿಗೆ ವ್ಯವಸ್ಥೆ ಇಲ್ಲ ಉದ್ದ ಜಿಗಿತಕ್ಕೆ ಮರಳನ್ನು ಹಾಕಿದರೆ ಕ್ರೀಡಾಕೂಟ ಮುಗಿಯುತ್ತಿದ್ದಂತೆ ಮರಳನ್ನು ಕದ್ದುಕೊಂಡು ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕರು.

‘ಜಾತಿ ಸಮುದಾಯಗಳಿಗೆ ಭವನ ನಿರ್ಮಿಸಿಕೊಡಲು ವಿಶಾಲ ನಿವೇಶನಗಳನ್ನು ಹುಡುಕಿಕೊಡುವ ಅಧಿಕಾರಿಗಳಿಗೆ ಜಾಗವೇ ಸಿಗುತ್ತಿಲ್ಲ ಎನ್ನುವುದು ಹಾಸ್ಯಾಸ್ಪದ. ಮುಖ್ಯವಾಗಿ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ. ಹೀಗಾಗಿ ಕ್ರೀಡಾ ಚಟುವಟಿಕೆಯಲ್ಲಿ ತಾಲ್ಲೂಕು ಹಿಂದೆ ಬಿದ್ದಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ.

ಕ್ರೀಡಾ ಇಲಾಖೆ ನಿರ್ಲಕ್ಷ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದೆ. ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಇದುವರೆಗೆ ಯಾವುದೇ ಕ್ರಮ ವಹಿಸಿಲ್ಲ. ಪಟ್ಟಣದಲ್ಲಿ ಸುಸಜ್ಜಿತ ತಾಲ್ಲೂಕು ಕ್ರೀಡಾಂಗಣವನ್ನು ನಿರ್ಮಿಸಬೇಕು ಎಂದು ಕ್ರೀಡಾಪಟುಗಳು, ಕ್ರೀಡಾಸಕ್ತರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನು ನೀಡಲು ಆಹ್ವಾನ’

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹುಲಸೂರ ತಾಲ್ಲೂಕಿನಲ್ಲಿ ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಿಸುವ ಯೋಜನೆ ಕೈಗೊಳ್ಳಲಾಗಿದೆ. ಆದರೆ ಅಗತ್ಯ ಸರ್ಕಾರಿ ಜಮೀನು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಮೂರುರಿಂದ ಐದು ಎಕರೆ ವಿಸ್ತೀರ್ಣದ ಸೂಕ್ತ ಖಾಸಗಿ ಜಮೀನು ನೀಡಲು ಭೂ ಮಾಲೀಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ದರದಂತೆ ಜಮೀನು ನೀಡಲು ಆಸಕ್ತಿ ಹೊಂದಿರುವವರು ಎಂಟು ದಿನಗಳೊಳಗೆ ಸಂಬಂಧಿಸಿದ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ‘ಪ್ರಜಾವಾಣಿ’ಗೆ  ತಿಳಿಸಿದ್ದಾರೆ. ಯೋಜನೆಯಿಂದ ತಾಲ್ಲೂಕಿನಲ್ಲಿ ಕ್ರೀಡಾ ಮೂಲಸೌಕರ್ಯ ಬಲವರ್ಧನೆಗೊಂಡು ಯುವ ಪ್ರತಿಭೆಗೆ ಉತ್ತೇಜನ ಸಿಗಲಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.