ರಾಯಚೂರು: ಗಣಿತ ವಿಷಯವನ್ನು ಎಲ್ಲರೂ ಕಬ್ಬಿಣದ ಕಡಲೆ ಎನ್ನುತ್ತಾರೆ. ಆದರೆ, ಸಿಂಧನೂರಿನ ಜ್ಞಾನಜ್ಯೋತಿ ಪಿಯು ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಗಣಿತ ವಿಷಯವೆ ಅತ್ಯಂತ ಸರಳ. ಅಲ್ಲಿ ತುಂಬಾ ಅನುಭವಿ ಶಿಕ್ಷಕರಿದ್ದಾರೆ. ಪ್ರತಿನಿತ್ಯ ಸಂಜೆ ‘ಸ್ಟಡೀಸ್ ಅವರ್’ ಮಾಡಿಸುತ್ತಿದ್ದರು. ಪರೀಕ್ಷೆಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು ಎಂದು ಹೇಳಿ, ಬರೆಸುತ್ತಿದ್ದರು. ಇದರಿಂದಾಗಿ ಗಣಿತ ವಿಷಯ ಕಠಿಣ ಅನ್ನಿಸಲೇ ಇಲ್ಲ!
ಗಣಿತದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆಯುವುದಕ್ಕೆ ಕಾಲೇಜಿನ ಶಿಕ್ಷಕರ ಮಾರ್ಗದರ್ಶನ ಕಾರಣ. ನಾಳೆ ಯಾವ ಪಾಠವಿದೆ ಎಂಬುದನ್ನು ಒಂದು ದಿನ ಮೊದಲೆ ಶಿಕ್ಷಕರು ಹೇಳುತ್ತಿದ್ದರು. ನಾನು ಅದನ್ನು ಮುಂಚಿತವಾಗಿ ಓದಿಕೊಂಡು ಹೋಗುತ್ತಿದ್ದೆ. ಹೀಗಾಗಿ ಶಾಲೆಯಲ್ಲಿ ಪ್ರಶ್ನೆಗಳನ್ನು ಕೇಳಿದ ತಕ್ಷಣವೇ ಉತ್ತರ ಬರೆದು ಕೊಡುತ್ತಿದ್ದೆ. ಗಣಿತ ಲೆಕ್ಕಗಳನ್ನು ಹೆಚ್ಚು ಬರೆದು ಅಭ್ಯಾಸ ಮಾಡಿದ್ದರಿಂದ ಸಹಾಯವಾಯಿತು.
ನಿದ್ದೆ ಬಿಟ್ಟು ಓದುವುದು ನನ್ನಿಂದ ಸಾಧ್ಯವಾಗುವುದಿಲ್ಲ. ರಾತ್ರಿ ನಿದ್ದೆ ಬರುವವರೆಗೂ ಗರಿಷ್ಠ 11 ಗಂಟೆವರೆಗೂ ಓದಿಕೊಳ್ಳುತ್ತಿದ್ದೆ. ಮನೆಯಲ್ಲಿ ಬೈಯ್ದು ಮಲಗಿಸುತ್ತಿದ್ದರು. ಬೆಳಿಗ್ಗೆ ಬೇಗ ಏಳುವುದು ರೂಢಿ ಇರಲಿಲ್ಲ. ಎಲ್ಲರಂತೆಯೇ ಬೆಳಿಗ್ಗೆ 6 ಗಂಟೆ ಏಳುತ್ತಿದ್ದೆ. ಶಿಕ್ಷಕರು ಹೇಳಿದ್ದನ್ನು ಚಾಚು ತಪ್ಪದೇ ಮನೆಯಲ್ಲಿ ಪಾಲನೆ ಮಾಡಿಕೊಂಡು ಹೋಗುತ್ತಿದ್ದೆ. ಪಿಯುಸಿ ಎರಡನೇ ವರ್ಷ ವಿಜ್ಞಾನದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದಕ್ಕೆ ಇದೊಂದು ನೆರವಾಯಿತು.
ಮೊಬೈಲ್ ಮತ್ತು ಟಿವಿ ನಿಯಮಿತವಾಗಿ ನೋಡುತ್ತೇನೆ. ಮೊಬೈಲ್ ಮೂಲಕ ಸ್ನೇಹಿತರು ನೋಟ್ಸ್ ಕಳುಹಿಸುತ್ತಿದ್ದರು. ಏನಾದರೂ ಪ್ರಶ್ನೆಗಳಿದ್ದರೆ, ಶಿಕ್ಷಕರು ಮೊಬೈಲ್ನಲ್ಲಿ ಉತ್ತರಿಸುತ್ತಿದ್ದರು. ಯಾವುದಾದರೂ ಶಬ್ದ ಅಥವಾ ಸಮಸ್ಯೆಗಳು ಕಠಿಣ ಅನ್ನಿಸಿದರೆ, ಗೂಗಲ್ನಲ್ಲಿ ಹುಡುಕಿಕೊಂಡು ಓದುತ್ತಿದ್ದೆ. ಸಕಾರಾತ್ಮಕ ಉದ್ದೇಶಕ್ಕಾಗಿ ಮಾತ್ರ ಮೊಬೈಲ್ ಹೆಚ್ಚು ಬಳಕೆ ಮಾಡಿಕೊಂಡಿದ್ದೇನೆ.
ಟ್ಯುಷನ್ಗೆ ಹೋಗಿಲ್ಲ. ಕಾಲೇಜಿನಲ್ಲಿಯೇ ಎಲ್ಲವನ್ನು ಹೇಳಿಕೊಡುತ್ತಿದ್ದರು. ಸ್ನೇಹಿತರೊಂದಿಗೆ ವಿಷಯ ಹಂಚಿಕೊಳ್ಳುವುದು ಕೂಡಾ ಹೆಚ್ಚು ಅಂಕಗಳನ್ನು ಪಡೆಯಲು ನೆರವಾಯಿತು. ಪಿಯುಸಿ ಕಾಲೇಜಿಗೆ ಸೇರಿಕೊಂಡ ಬಳಿಕ ಹೊರಗೆ ಆಟವಾಡುವುದನ್ನು ಸಂಪೂರ್ಣ ನಿಲ್ಲಿಸಿದೆ. ಪಠ್ಯದಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ಸಾಧ್ಯವಾದಷ್ಟು ಓದಿಕೊಳ್ಳುತ್ತೇನೆ.
ಸದ್ಯ ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ತಯಾರಿ ಮಾಡುತ್ತಿದ್ದೇನೆ. ಆಕಾಶ್ ನೀಟ್ ಕೋಚಿಂಗ್ನಲ್ಲಿ ತರಬೇತಿ ಪಡೆಯುತ್ತಿದ್ದು, ಎಂಬಿಬಿಎಸ್ ಕಾಲೇಜಿಗೆ ಪ್ರವೇಶ ಪಡೆದು ವೈದ್ಯನಾಗಬೇಕು ಎನ್ನುವ ಹಂಬಲವಿದೆ.
**
ಪ್ರತಿಭೆಯ ವಿವರ
ಹೆಸರು: ಸಂತೋಷ ಗುಡಿ
ತಂದೆ: ಭಾಸ್ಕರ್ ಗುಡಿ
ತಾಯಿ: ಗೀತಾ ಗುಡಿ
ಊರು: ಸಿಂಧನೂರು ನಗರ ನಿವಾಸಿ
ಕಾಲೇಜು: ಸಿಂಧನೂರಿನ ಜ್ಞಾನಜ್ಯೋತಿ ವಿಜ್ಞಾನ ಪಪೂ ಕಾಲೇಜು
ಪಡೆದ ಅಂಕ: 600/581 (ಶೇ 96.83)
*
ಕನ್ನಡ ಮಾಧ್ಯಮದಲ್ಲಿ ಓದಿಕೊಂಡು ಬಹಳ ಒಳ್ಳೆಯ ಅಂಕಗಳನ್ನು ಪಡೆದಿದ್ದಾನೆ. ತುಂಬಾ ವಿಧೇಯ ವಿದ್ಯಾರ್ಥಿ. ಅನಾರೋಗ್ಯವಿದ್ದರೂ ಕಾಲೇಜು ತಪ್ಪಿಸುತ್ತಿರಲಿಲ್ಲ. ಅಂದುಕೊಂಡಿದ್ದನ್ನು ಸಾಧಿಸುವ ಛಲವಿದೆ.
–ವಿಷ್ಣುವರ್ಧನ ರೆಡ್ಡಿ,ಪ್ರಾಂಶುಪಾಲರು, ಜ್ಞಾನಜ್ಯೋತಿ ಪಿಯು ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.