ADVERTISEMENT

ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಳ

ಬಸವರಾಜ ಬೋಗಾವತಿ
Published 12 ಅಕ್ಟೋಬರ್ 2020, 7:58 IST
Last Updated 12 ಅಕ್ಟೋಬರ್ 2020, 7:58 IST
ಜಗನ್ನಾಥದಾಸರ ಸನ್ನಿಧಾನ
ಜಗನ್ನಾಥದಾಸರ ಸನ್ನಿಧಾನ   

ಮಾನ್ವಿ: ಪಟ್ಟಣದ ಜಗನ್ನಾಥದಾಸರ ಸನ್ನಿಧಾನ, ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ವಿಜಯದಾಸರ ಕಟ್ಟೆ, ರಾಜಲಬಂಡಾ ಅಣೆಕಟ್ಟು, ಮುಷ್ಟೂರು ಆಂಜನೇಯ ಸ್ವಾಮಿ ಗುಡಿ, ನೀರಮಾನ್ವಿ ಗ್ರಾಮದ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಪ್ರಮುಖ ಯಾತ್ರಾ ಸ್ಥಳಗಳು.

ಲಾಕ್‍ಡೌನ್ ಸಡಿಲಿಕೆಯಾಗಿ ದೇವಸ್ಥಾನಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ನಂತರ ದರ್ಶನಕ್ಕಾಗಿ ಬರುವ ಭಕ್ತರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಪಕ್ಕದ ಆಂಧ್ರದ ಗಡಿಭಾಗದಲ್ಲಿರುವ ಮಂತ್ರಾಲಯಕ್ಕೆ ಬರುವ ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತರು ಮಾನ್ವಿ ಪಟ್ಟಣದ ಜಗನ್ನಾಥದಾಸರ ಸನ್ನಿಧಾನ ಹಾಗೂ ಚೀಕಲಪರ್ವಿ ವಿಜಯದಾಸರ ನಿವಾಸ, ವಿಜಯದಾಸರ ಕಟ್ಟೆ ಹಾಗೂ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಮಂತ್ರಾಲಯಕ್ಕೆ ತೆರಳುವ ಮಾರ್ಗಮಧ್ಯೆ ರಾಜಲಬಂಡಾ ಅಣೆಕಟ್ಟು ವೀಕ್ಷಣೆಗೆ ತೆರಳುತ್ತಾರೆ. ಕಳೆದ ತಿಂಗಳು ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದ ನೀರು ನದಿಗೆ ಹರಿಬಿಟ್ಟ ನಂತರ ರಾಜಲಬಂಡಾ ಅಣೆಕಟ್ಟು ಮೈದುಂಬಿ ಹರಿಯುತ್ತಿದೆ. ಪ್ರತಿ ಭಾನುವಾರ ಈ ಅಣೆಕಟ್ಟು ವೀಕ್ಷಣೆಗೆ ನೂರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ADVERTISEMENT

ಪ್ರತಿ ಶನಿವಾರ ಮುಷ್ಟೂರು ಗ್ರಾಮದ ಆಂಜನೇಯ ಸ್ವಾಮಿ ಗುಡಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ತಾಲ್ಲೂಕಿನ ನೀರಮಾನ್ವಿ ಗ್ರಾಮದ ಸುಪ್ರಸಿದ್ಧ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಅಮವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ.

‘ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ನಂತರ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಸಾಮಾನ್ಯವಾಗಿ 300ಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ’ ಎಂದು ರೇಣುಕಾ ಯಲ್ಲಮ್ಮ ದೇವಿ ಗುಡಿಯ ಅರ್ಚಕ ರಮೇಶ ಪೂಜಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.