ADVERTISEMENT

ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿ ಪ್ರೇರಣೆ: ಪಂಪಣ್ಣ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 12:53 IST
Last Updated 28 ಜೂನ್ 2021, 12:53 IST
ರಾಯಚೂರಿನ ಮಲಿಯಾಬಾದ್ ಟ್ರೀ ಪಾರ್ಕ್‌ನಲ್ಲಿ ಜಿಲ್ಲಾ ಅರಣ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಭಾನುವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ ಡಿ. ಪಂಪಣ್ಣ ಅವರು ಸಸಿನೆಟ್ಟು ಉದ್ಘಾಟಿಸಿದರು
ರಾಯಚೂರಿನ ಮಲಿಯಾಬಾದ್ ಟ್ರೀ ಪಾರ್ಕ್‌ನಲ್ಲಿ ಜಿಲ್ಲಾ ಅರಣ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಭಾನುವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ ಡಿ. ಪಂಪಣ್ಣ ಅವರು ಸಸಿನೆಟ್ಟು ಉದ್ಘಾಟಿಸಿದರು   

ರಾಯಚೂರು: ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಮಹಾತ್ಮ ಗಾಂಧಿಜೀಯವರೇ ಪ್ರೇರಣೆಯಾಗಿದ್ದರು ಎಂದು ಸ್ವಾತಂತ್ರ್ಯ ಹೋರಾಟಗಾರ ಡಿ. ಪಂಪಣ್ಣ ಹೇಳಿದರು.

ನಗರದ ಮಲಿಯಾಬಾದ್ ಟ್ರೀ ಪಾರ್ಕ್‌ನಲ್ಲಿ ಜಿಲ್ಲಾ ಅರಣ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಭಾನುವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಂಧಿಜೀಯವರ ನಾಯಕತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕುರಿತು ಹಲವು ವಿಚಾರಗಳನ್ನು ಮನೆಯಲ್ಲಿ ಚರ್ಚಿಸಲಾಗುತ್ತಿತ್ತು. ಅಲ್ಲದೇ ಹಲವು ದಂತಕತೆಗಳು ಪ್ರಚಲಿತದಲ್ಲಿದ್ದವು. ಹದಿಹರೆಯದ ವಯಸ್ಸಿನಲ್ಲಿ ಅವು ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದ ಕಾರಣ ಸ್ವಾತಂತ್ರ್ಯ ಹೋರಾಟಕ್ಕೆ ಧುಮಕಿದೆ ಎಂದು ಹೇಳಿದರು.

ADVERTISEMENT

1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದರೂ ರಾಯಚೂರಿಗೆ ದೊರೆಯಲಿಲ್ಲ, ನಿಜಾಂ ಆಡಳಿತ ನಿರಾಕರಿಸಿತ್ತು, ಇನ್ನು ಸ್ವಾತಂತ್ರ್ಯದ ಬೆಳಕು ಹರಿಯದ ಕಾರಣ ಅಂದು ಮಟಮಾರಿ ಪರ್ವತ ರೆಡ್ಡಿ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಇಂದಿನ ಜಿಲ್ಲಾಧಿಕಾರಿ ಕಚೇರಿಯಾಗಿರುವ ಸಾತ್ ಕಚೇರಿ ಮೇಲ್ಭಾಗದಲ್ಲಿ ಹುಡುಗರ ತಂಡವೊಂದು ಸೇರಿಕೊಂಡು ರಾಷ್ಟ್ರಧ್ವಜವನ್ನು ಹಾರಿಸಿದ್ದೆವು ಎಂದು ನೆನಪಿಸಿಕೊಂಡರು.

ಅದೇರೀತಿ ಅಕ್ಟೋಬರ್ 2 ರಂದು ಗಾಂಧೀ ಜಯಂತಿ ಆಚರಣೆಗೂ ಅವಕಾಶವಿರಲಿಲ್ಲ, ಒಂದು ರೀತಿಯ ನಿಷೇಧಾಜ್ಞೆ ಜಾರಿಗೊಂಡಿತ್ತು, ಅಂದು ನಗರದ ರೈಲು ನಿಲ್ದಾಣದಲ್ಲಿ ಗಾಂಧಿಜೀಯವರ ಪೋಟೋ ಇರಿಸಿ, ಹಾರ ಹಾಕಿ ನಮಿಸಲಾಯಿತು ಎಂದು ತಿಳಿಸಿದರು.

ಹೋರಾಟದ ಸಂದರ್ಭದಲ್ಲಿ ಬಂಧನಕ್ಕೊಳಗಾದಾಗ ಸ್ವಾತಂತ್ರ್ಯ ಪ್ರೇಮಿಗಳು ಜೈಲಿನಲ್ಲಿಯೇ ಊಟ, ಉಪಹಾರ ವಿತರಿಸಿದ್ದನ್ನು ಸ್ಮರಿಸಿದ ಅವರು, ಗಾಂಧಿ ಅವರ ಮಾರ್ಗದರ್ಶನದಲ್ಲಿ ಹೋರಾಟ ರೂಪರೇಷೆಗಳನ್ನು ನಿರ್ಧರಿಸುವುದಲ್ಲಿ ಹೆಜ್ಜೆ ಇಟ್ಟಿದ್ದು, ಹಂತ ಹಂತವಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಂಡು ಹಲವು ಬಾರಿ ಜೈಲು ಶಿಕ್ಷೆ ಅನುಭವಿಸಿದ ಘಟನೆಗಳನ್ನು ಅವರು ಎಳೆ ಎಳೆಯಾಗಿ ಹೇಳಿದರು. ಉಪ ಅರಣ್ಯ ಸಂರಕ್ಷಾಧಿಕಾರಿ ಚಂದ್ರಣ್ಣ ಮಾತನಾಡಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಶ್ರೀಧರ್ ಮಾತನಾಡಿ, ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನಾಚರಣೆ ಆಚರಿಸಲಾಗುತ್ತದೆ, ಈ ಬಾರಿಯ ಘೋಷವಾಕ್ಯ ಪರಿಸರ ಪುನಃಶ್ಚೇತನ ಅಂದರೆ, ಪರಿಸರವನ್ನೇ ಚೇತನಗೊಳಿಸುವ ಅನಿವಾರ್ಯತೆ ಇದೀಗ ಎದುರಾಗಿದೆ, ಮುಂದಿನ ಪೀಳಿಗೆಗೆ ಸಮತೋಲನ ಪರಿಸರ ನೀಡಬೇಕಾದಲ್ಲೀ ಪರಿಸರವನ್ನು ಸಂರಕ್ಷಿಸಬೇಕಿದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಒಂಟೇಕರ್, ವಲಯ ಅರಣ್ಯಾಧಿಕಾರಿ ರಾಜೇಶ್, ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್, ಅರಣ್ಯ ರಕ್ಷಕರಾದ ಸಂಗಣ್ಣ ಮಿಟ್ಟಿ, ಯಲ್ಲಪ್ಪ, ಮೌನೇಶ್, ಸ್ವಾತಂತ್ರ‍್ಯ ಹೋರಾಟಗಾರರ ಕ್ಷೇಮಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಶೇಖರ್ ಮತ್ತಿತರರು ಇದ್ದರು. ರೆಡ್ ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕ ದಂಡಪ್ಪ ಬಿರಾದರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.