ರಾಯಚೂರು: ವೈಯಕ್ತಿಕ ಸ್ವಚ್ಛತೆಗೆ ಗಮನ ಹರಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಭಾರತೀಯ ಕುಟುಂಬ ಯೋಜನಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿ.ಎ. ಮಾಲಿಪಾಟೀಲ ಹೇಳಿದರು.
ತಾಲ್ಲೂಕಿನ ಯಾಪಲದಿನ್ನಿ ಗ್ರಾಮದ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ಭಾರತೀಯ ಕುಟುಂಬ ಯೋಜನಾ ಸಂಘ ಮತ್ತು ಕರ್ನಾಟಕ ಪಬ್ಲಿಕ ಶಾಲೆ ಯಾಪಲದಿನ್ನಿ, ರಿಮ್ಸ್, ಎಎಂಇ ದಂತ ಮಹಾವಿದ್ಯಾಲಯದಿಂದ ಶನಿವಾರ ಏರ್ಪಡಿಸಿದ್ದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ದಂತ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಪ್ರದೀಪ್ ಮಾತನಾಡಿ, ದೇಹದ ಎಲ್ಲ ಭಾಗದಂತೆ ಹಲ್ಲಿನ ಆರೋಗ್ಯಕ್ಕೆ ಮುಂಜಾಗ್ರತೆ ತುಂಬಾ ಮುಖ್ಯವಾದುದು. ತಂಬಾಕು ಸೇವನೆಯನ್ನು ಬಿಡಬೇಕು. ಸಿಹಿ ಪದಾರ್ಥಗಳ ಸೇವನೆಯ ನಂತರ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹಲ್ಲಿನ ಮಧ್ಯದಲ್ಲಿ ಕಪ್ಪು ಕಲೆಗಳು ಪ್ರಾರಂಭವಾಗುತ್ತವೆ. ಇದನ್ನು ಕ್ಯಾವಿಟೀಸ್ ಎಂದು ಕರೆಯಲಾಗುತ್ತದೆ. ಜೊತೆಗೆ ಇನ್ನೊಬ್ಬರಿಗೆ ಅಸಹ್ಯಕರವಾಗಿ ಕಾಣುತ್ತದೆ. ಆದ್ದರಿಂದ ಪ್ರತಿ ದಿನ ಎರಡು ಬಾರಿ ಹಲ್ಲು ಉಜ್ಜಬೇಕು ಎಂದು ತಿಳಿಸಿದರು.
ರಿಮ್ಸ್ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಕರೀಷ್ಮಾ ಮಾತನಾಡಿ, ಕಣ್ಣು ತುಂಬಾ ಸೂಕ್ಷ್ಮವಾದ ಭಾಗ, ಆದ್ದರಿಂದ ಕಣ್ಣಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಯಾಪಲದಿನ್ನಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಅಮರೇಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು
ಎಫ್.ಪಿ.ಎ.ಐನ ಗೌರವ ಖಜಾಂಚಿ ಎಚ್.ಹನುಮಂತಪ್ಪ ಹಾಗೂ ಗೌರವಕಾರ್ಯದರ್ಶಿ ಆಲಿಯಾ ಖಾನುಮ್.ಕೆ ಮತ್ತು ಶಾಲೆಯ ಮುಖ್ಯಗುರು ನಬಿಚಾಂದ, ವೇಣುಗೋಪಾಲ್ ರೆಡ್ಡಿ, ಗ್ರಾಮ ಪಂಚಾಯತ ಅಧ್ಯಕ್ಷ ಸೂಗೂರಪ್ಪ ನಾಯಕ, ಗ್ರಾಮ ಪಂಚಾಯತ ಕಾರ್ಯದರ್ಶಿ ಗೋಪಾಲ ಶೆಟ್ಟಿ, ವಿರಾಟ ಪದವಿ ಕಾಲೇಜಿನ ಪ್ರಾಂಶುಪಾಲರಾದ ಮೌಲಪ್ಪ ಯಾಪಲದಿನ್ನಿ ಇದ್ದರು.
ವಿದ್ಯಾರ್ಥಿನಿಯರಾದ ಜಯಸುಧಾ ಮತ್ತು ತ್ರಿವೇಣಿ ಪ್ರಾರ್ಥಿಸಿದರು. ವೇಣುಗೋಪಾಲ್ ಸ್ವಾಗತಿಸಿದದರು. ನಾಗಪ್ಪ ನಿರೂಪಿಸಿದರು. ಎಫ್.ಪಿ.ಎ.ಐ ಶಾಖಾ ವ್ಯವಸ್ಥಾಪಕ ಮುನಿಸ್ವಾಮಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.