ಮಸ್ಕಿ: ನ್ಯಾ. ಎ.ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಭ್ರಮರಾಂಬಾ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ ಕನಕ ವೃತ್ತ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ ಮುಖಾಂತರ ಸಾಗಿ ತಹಶಿಲ್ದಾರ ಕಚೇರಿಗೆ ಆಗಮಿಸಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡ ರವಿಕುಮಾರ್ ಚಿಗರಿ ಅವರು, ’ಸಂವಿಧಾನದ ಮೂಲ ಆಶಯವಾಗಿರುವ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಸಂರಕ್ಷಣಾದಡಿ ಭೋವಿ, ಬಂಜಾರಾ, ಲಂಬಾಣಿ, ಕೊರವ, ಕೊರಚ ಇತ್ಯಾದಿ ಅಲೆಮಾರಿ ಜನಾಂಗದ ಏಳಿಗೆಗಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕಾಗಿದೆ‘ ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಕವಿತಾ ಆರ್. ಮನವಿ ಸ್ವೀಕರಿಸಿದರು.
ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ದುರುಗಪ್ಪ ಚಿಗರಿ, ನೀಲಕಂಠಪ್ಪ ಭಜಂತ್ರಿ, ಮುಖಂಡರಾದ ಮಲ್ಲಯ್ಯ ಗುಡಿಸಲಿ, ವೀರೇಶ್ ಆನೆಹೊಸೂರು, ಆನಂದ ಬನಗಲ್, ಮಲ್ಲಯ್ಯ ನಾಗರಾಳ , ಯಲ್ಲಪ್ಪ ತುರ್ವಿಹಾಳ, ಮಲ್ಲಯ್ಯ ಭಜಂತ್ರಿ ವಸಂತ್ ಭಜಂತ್ರಿ ದೇವಣ್ಣ ಜಾಧವ್, ಲೋಕೇಶ್ ಜಾಧವ್, ಅಂಬಣ್ಣ ಭೋವಿ, ಶಿವಪ್ಪ ಬಸಾಪೂರ, ಸೀತಾರಾಮ್ , ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.