ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆಯ 55ನೇ ಉಪ ಕಾಲುವೆಗೆ ಬಿದ್ದಿದ್ದ ಬೋಂಗಾ ದುರಸ್ತಿ ಕಾರ್ಯ ಬರದಿಂದ ಸಾಗಿದ್ದು ಜು. 10 ರ ಒಳಗೆ ಕಾಮಗಾರಿ ಪೂರ್ಣವಾಗಲಿದೆ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ತಿಳಿಸಿದರು.
ಮೈಲ್ 55 ರಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿಯನ್ನುಶುಕ್ರವಾರ ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಡದಂಡೆ ಕಾಲುವೆಗೆ ತುಂಗಭದ್ರಾ ಜಲಾಶಯದಿಂದ ಜು. 10 ರಿಂದ ನೀರು ಬಿಡಲಾಗುತ್ತಿದೆ. ಜು. 15ಕ್ಕೆ ನೀರು ಮಸ್ಕಿ ಭಾಗಕ್ಕೆ ತಲುಪಲಿದೆ. ಅಷ್ಟರೊಳಗೆ ದುರಸ್ತಿ ಕಾರ್ಯ ಮುಗಿಯಲಿದೆ ಎಂದರು.
55 ನೇ ಉಪ ಕಾಲುವೆಯ ರೈತರ ಜಮೀನಿಗೆ ಎಂದಿನಂತೆ ನೀರು ಕೊಡಲಾಗುತ್ತದೆ. ರೈತರು ಆತಂಕ ಪಡಬೇಕಾಗಿಲ್ಲ ಎಂದರು.
ಈಗಾಗಲೇ ಅಧಿಕಾರಿಗಳು ಸ್ಥಳದಲ್ಲಿಯೇ ಬಿಡು ಬಿಟ್ಟು ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಹಗಲು ರಾತ್ರಿ ಕೆಲಸ ಮಾಡುತ್ತಿದ್ದರಿಂದ ಕಾಮಗಾರಿ ಬೇಗ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಕಾಮಗಾರಿ ಗುಣಮಟ್ಟದ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಪ್ರಕಾಶ ರಾವ್, ಎಇಇ ದಾವುದ್, ಎಂಜನಿಯರ್ ಪ್ರದೀಪ್ ಲೋಕ್ರೆ ಮುಖಂಡ ಮಲ್ಲಯ್ಯ ಬಳ್ಳಾ, ಬಸವರಾಜ ಬೆಂಚಮರಡಿ ಸೇರಿದಂತೆ ಮುಖಂಡರು, ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.