ಸಿಂಧನೂರು: ನಗರದ ವಳಬಳ್ಳಾರಿ ರಸ್ತೆಯಲ್ಲಿರುವ ಜೋಳದಸ್ವಾಮಿ ಆಂಜನೇಯ ಸ್ವಾಮಿಯ 4ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಅರ್ಚಕ ರಂಗನಾಥ ಆಚಾರ್ ನೇತೃತ್ವದಲ್ಲಿ ಬೆಳಿಗ್ಗೆ ಆಂಜನೇಯ ಸ್ವಾಮಿ ಮೂರ್ತಿಗೆ ಅಭಿಷೇಕ, ಅಲಂಕಾರ, ಎಲಿಚಟ್ಟು ಮುಡಿಸಿ ವಿಶೇಷ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ನಂತರ ಡೊಳ್ಳು ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ತೆರಳಿ ಗಂಗಾ ಪೂಜೆ, ಕಳಸಾರೋಹಣ ನಡೆಸಲಾಯಿತು.
ನಗರದ ಸುಕಾಲಪೇಟೆ ಸೇರಿದಂತೆ ಉದ್ಬಾಳ, ಗೋಮರ್ಸಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದೇವಸ್ಥಾನಕ್ಕೆ ಬಂದು ಆಂಜನೇಯ ಸ್ವಾಮಿ ಮೂರ್ತಿಯ ದರ್ಶನ ಪಡೆದರು.
ಸಂಜೆ ದೇವಸ್ಥಾನದ ಆವರಣದಲ್ಲಿ ಆಂಜನೇಯ ಸ್ವಾಮಿಯ ರಥೋತ್ಸವಕ್ಕೆ ಅರ್ಚಕರು ಚಾಲನೆ ನೀಡಿದರು. ರಥ ಮುಂದಕ್ಕೆ ಸಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು, ಬಾಳೆಹಣ್ಣು, ಉತ್ತುತ್ತಿ, ಹೂವು ಎಸೆದು ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.
ಬಂಗಾರಿ ಕ್ಯಾಂಪಿನ ಸಿದ್ದಾಶ್ರಮದ ಸದಾನಂದ ಶರಣರು, ಸುಕಾಲಪೇಟೆಯ ನಂಜುಂಡೇಶ್ವರ ಗುರುವಿನ ಮಠದ ಸಿದ್ರಾಮಯ್ಯ ಗುರುವಿನ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಕಾರ್ಯದರ್ಶಿ ಹನುಮೇಶ ಕುರಕುಂದಿ, ಗುತ್ತಿಗೆದಾರ ನರೇಂದ್ರ ಶ್ರೀಪುರಂಜಂಕ್ಷನ್, ಜೋಳದರಾಶಿ ಆಂಜನೇಯ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ರಮೇಶ ಯಾದವ, ಸದಸ್ಯರಾದ ಶ್ರೀನಿವಾಸ.ವೈ, ಲಿಂಗಪ್ಪ ಸುಕಾಲಪೇಟೆ, ದುರುಗಪ್ಪ ಮೇಸ್ತ್ರಿ, ಮಂಜು ಬಾದಾಮಿ, ಶಿವಕುಮಾರಗೌಡ, ವೆಂಕಟೇಶ ಮೇಸ್ತ್ರಿ, ಶಿವಪ್ಪ, ಮಲ್ಲಪ್ಪ ಯಾದವ, ಕಾಳಪ್ಪ ಮೇಸ್ತ್ರಿ, ಲಿಂಗಪ್ಪ ಹಂಚಿನಾಳ, ಆರ್.ಸಿ.ಪಾಟೀಲ ಹಾಗೂ ಸೋಮಶೇಖರ ಹಾಜರಿದ್ದರು.
ರಥೋತ್ಸವದ ನಂತರ ನಡೆದ ರಸಮಂಜರಿ ಕಾರ್ಯಕ್ರಮ, ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದ ಬಸವರಾಜ ಬಲಕುಂದಿ ಅವರಿಂದ ಭರತನಾಟ್ಯ ಹಾಗೂ ತಿಮ್ಮಣ್ಣ ಸಾಗರಕ್ಯಾಂಪ್ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಭಕ್ತರ ಮನಸೂರೆಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.