ಜಾಲಹಳ್ಳಿ (ರಾಯಚೂರು): ‘ಕನಕಗುರು ಪೀಠದ ಸಿದ್ಧರಾಮಾನಂದ ಪುರಿ ಶ್ರೀಗಳು ಸಮಾಜದ ಕಟ್ಟಕಡೆಯ ಸಮುದಾಯಗಳ ಬಗ್ಗೆ ತುಂಬಾ ಕಾಳಜಿ ಹೊಂದಿದ್ದು, ಹಾಲುಮತ ಸಂಸ್ಕೃತಿ ವೈಭವದಲ್ಲಿ ನಿರಂತರವಾಗಿ ಸಣ್ಣ ಸಮುದಾಯಗಳನ್ನು ಗುರುತಿಸಿ ವೇದಿಕೆ ಕಲ್ಪಿಸುತ್ತಿದ್ದಾರೆ’ ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘರಾಜೇಂದ್ರಸ್ವಾಮಿ ಶ್ಲಾಘಿಸಿದರು.
ತಿಂಥಣಿ ಕನಕಗುರು ಪೀಠದಲ್ಲಿ ನಡೆದ ‘ಹಾಲುಮತ ಸಂಸ್ಕೃತಿ ವೈಭವ–2021’ ಉತ್ಸವದ ಎರಡನೇ ದಿನ ಬುಧವಾರ ಆಯೋಜಿಸಿದ್ದ ‘ಟಗರುಜೋಗಿಗಳು, ಹೆಳವರು, ಕಾಡುಸಿದ್ದರ ಸಮಾವೇಶ’ದ ಸಾನಿಧ್ಯ ವಹಿಸಿ ಮಾತನಾಡಿದರು.
‘ಚಿತ್ರದುರ್ಗದ ಮುರುಘಾಮಠದ ಗುರುಕುಲದಲ್ಲಿ ಶಿಕ್ಷಣ ಮುಗಿಸಿಕೊಂಡು ಅವರು ಪೀಠದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಾಂಸ್ಕೃತಿಕ ಉತ್ಸವ ಅರ್ಥಪೂರ್ಣವಾಗಿ ಆಯೋಜಿಸುತ್ತಿದ್ದಾರೆ. ಕುರುಬರು ಕುಬೇರರಾಗಬೇಕು ಎಂದು ಈ ಸಮಾಜದ ಮುಖಂಡರ ಎದುರು 25 ವರ್ಷಗಳ ಹಿಂದೆ ನಾನು ಹೇಳಿದ್ದೆ. ಅದರಂತೆ ಹಾಲುಮತದವರು ಈಗ ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಅರ್ಥಿಕವಾಗಿ ಬೆಳವಣಿಗೆ ಆಗುತ್ತಿರುವುದು ಕಾಣುತ್ತಿದೆ’ ಎಂದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, ‘ಸಚಿವ ಸಂಪುಟದಲ್ಲಿ ಮತ್ತೆ ಇಬ್ಬರು ಕುರುಬ ಸಮುದಾಯದವರು ಸೇರ್ಪಡೆ ಆಗುತ್ತಿರುವುದು ಸಂತೋಷವನ್ನುಂಟು ಮಾಡಿದೆ. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಕನಕಗುರು ಪೀಠ ಸ್ಥಾಪನೆಯಾದರೆ ಸಮುದಾಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.
ಸಮುದಾಯದ ಮುಖಂಡರಾದ ಎಚ್.ಎಂ.ರೇವಣ್ಣ, ವಿರೂಪಾಕ್ಷಪ್ಪ ಹಾಗೂ ಶಾಸಕ ಶಿವನಗೌಡ ನಾಯಕ ಮಾತನಾಡಿದರು. ‘ಅಲೆಮಾರಿ ಬುಡಕಟ್ಟುಗಳ ಸಮಸ್ಯೆ’ ಕುರಿತು ಮಧ್ಯಾಹ್ನ ಸಂವಾದ ನಡೆಯಿತು. ಜನವರಿ 14 ರಂದು ಹಾಲುಮತ ಸಂಸ್ಕೃತಿ ವೈಭವ ಉತ್ಸವ ಮುಕ್ತಾಯವಾಗಲಿದ್ದು, ಶ್ರೀ ಬೊಮಗೊಂಡೇಶ್ವರ, ಶ್ರೀ ಸಿದ್ಧರಾಮೇಶ್ವರ ಉತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.