ರಾಯಚೂರು: ದೇಶದ ಬಹುಜನ ಸಮಾಜದ ಜನರಿಗೆ ರಾಜಕೀಯ ಅಧಿಕಾರ ಪಡೆಯಲು ದೂರ ಆಲೋಚನೆಯಿಂದ ಮಾನ್ಯವರ್ ಕಾನ್ಶಿರಾಂ ಅವರು ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿ ಮಹಾನ್ ನಾಯಕರಾಗಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಅರಕಲಗೂಡ ಹೇಳಿದರು.
ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಮಾನ್ಯವಾರ್ ಕಾನ್ಶಿರಾಮ್ ಅವರ 15ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಯುವಜನತೆಯ ಏಳಿಗೆಗೆ ಕಾನ್ಶಿರಾಂ ಜೀ‘ ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಅನುಭವ ಇಲ್ಲದ ಜನರಿಗೆ ರಾಜ್ಯಾಧಿಕಾರ ನಡೆಸಲು ದಾರಿ ತೋರಿಸಿದ ನಾಯಕ ಕಾನ್ಶಿರಾಂ. ಬಹುಜನ ಸಮಾಜವನ್ನು ಆಳುವ ವರ್ಗವನ್ನಾಗಿ ಮಾಡುವ ಉದ್ದೇಶ ಹೊಂದಿದ್ದರು. ಬಿಜೆಪಿ ಕಾಂಗ್ರೆಸ್ ಸಂವಿಧಾನ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದು, ಖಾಸಗೀಕರಣ, ಉದಾರೀಕರಣ ಜಾಗತೀಕರಣಕ್ಕೆ ಮುಂದಾಗಿ ತುಳಿತಕ್ಕೊಳಗಾದ ಜನರಿಗೆ ಸರ್ಕಾರಿ ನೌಕರಿ ವಂಚಿಸುತ್ತಿದ್ದಾರೆ. ಸರ್ಕಾರಿ ಸಂಸ್ಥೆ ಬಂದ್ ಮಾಡಿ ಖಾಸಗೀಯವರ ಆಳುಗಳಾಗಿ ಕೆಲಸ ಮಾಡುವ ವ್ಯವಸ್ಥೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ವೈ. ನರಸಪ್ಪ, ಜಿಲ್ಲಾಧ್ಯಕ್ಷ ಹನುಮಂತರಾಯ ಕಪಗಲ್, ವಕೀಲ ಹನುಮಂತಪ್ಪ, ಬಸವರಾಜ ಭಂಡಾರಿ, ಅಂಬಣ್ಣ ಅರೋಲಿಕರ್,ಯಮನಪ್ಪ, ಶಾಮಸುಂದರ, ಅನಿಲ, ಹುಲಿಗೆಪ್ಪ, ಜಯಣ್ಣ, ಶೇಖರಪ್ಪಗೌಡ, ಜೇಮ್ಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.