ಕವಿತಾಳ: ಬೆಳಗಾವಿ–ರಾಯಚೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕಾರಣ ಭಾರಿ ವಾಹನ ಸಂಚಾರದಿಂದ ಸರ್ವೀಸ್ ರಸ್ತೆಗಳು ಹದಗೆಟ್ಟಿವೆ. ಗುತ್ತಿಗೆ ಪಡೆದ ಕಂಪನಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸರ್ವೀಸ್ ರಸ್ತೆ ದುರಸ್ತಿಗೆ ಕಾಳಜಿ ವಹಿಸುತ್ತಿಲ್ಲ. ಸಾರ್ವಜನಿಕರು, ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಇಲ್ಲಿನ ಮಸ್ಕಿ ರಸ್ತೆ ಹಾಗೂ ಆನಂದಗಲ್ ಗ್ರಾಮದ ಹತ್ತಿರ ತಾತ್ಕಾಲಿಕ ಕ್ಯಾಂಪ್ ಹಾಕಲಾಗಿದೆ. ಕಂಕರ್, ಮರಂ ಹಾಗೂ ಮತ್ತಿತರ ಅಗತ್ಯ ಸಾಮಗ್ರಿಯನ್ನು ಬೇರೆಡೆಯಿಂದ ತಂದು ಇಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಬೇರಡೆ ಸಾಗಿಸಲಾಗುತ್ತಿದೆ.
‘15 ಟನ್ ಭಾರ ಸಾಗಿಸುವ ಲಾರಿಗಳಲ್ಲಿ ನಿಯಮ ಉಲ್ಲಂಘಿಸಿ 40 ಟನ್ಗೂ ಅಧಿಕ ಭಾರ ಸಾಗಿಸುತ್ತಿದ್ದು, ಕವಿತಾಳದಿಂದ ಮಸ್ಕಿ, ಆನಂದಗಲ್, ಹರ್ವಾಪುರದಿಂದ ಪಾಮನಕಲ್ಲೂರು ಮತ್ತು ಗೊಲ್ದಿನ್ನಿ ಹತ್ತಿರ ಮುಖ್ಯ ರಸ್ತೆಗಳು ಸಂಪೂರ್ಣ ಹಾಳಾಗಿವೆ’ ಎಂದು ಸ್ಥಳೀಯರು ಆರೋಪಿಸಿದರು.
‘ಹೆದ್ದಾರಿ ನಿರ್ಮಾಣಕ್ಕೆ ಜಮೀನು ಸ್ವಾಧೀನ ಪಡಿಸಿಕೊಳ್ಳುವ ವಿಷಯದಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಆಗಮಿಸಿ ರೈತರ ಮೇಲೆ ದೌರ್ಜನ್ಯ ನಡೆಸುವ ಅಧಿಕಾರಿಗಳು ಅಧಿಕ ಭಾರ ಸಾಗಾಟದಿಂದ ಹಾಳಾದ ಸರ್ವೀಸ್ ರಸ್ತೆ ದುರಸ್ತಿ ಬಗ್ಗೆ ಕಾಳಜಿ ವಹಿಸದಿರುವುದು ವಿಪರ್ಯಾಸ’ ಎಂದು ಕಾರ್ಮಿಕ ಸಂಘಟನೆ ಮುಖಂಡ ಎಂ.ಡಿ.ಮೆಹಬೂಬ್ ಆರೋಪಿಸಿದರು.
ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಿರ್ಮಿಸಿದ ಸರ್ವೀಸ್ ರಸ್ತೆಗಳು ಅಧಿಕ ಭಾರ ಸಾಗಿಸುವ ಲಾರಿಗಳ ಸಂಚಾರದಿಂದ ಹಾಳಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ತುರ್ತು ಗಮನಹರಿಸಬೇಕುಬಲವಂತರಾಯ ವಟಗಲ್ ಕಾಂಗ್ರೆಸ್ ಮುಖಂಡ
ಹೆದ್ದಾರಿ ನಿರ್ಮಾಣ ಗುತ್ತಿಗೆ ಪಡೆದ ಹಾಗೂ ಸಾಮಗ್ರಿ ಪೂರೈಸುವ ಕಂಪನಿಗಳವರು ಪರಸ್ಪರ ಆರೋಪಿಸುವ ಮೂಲಕ ಸರ್ವೀಸ್ ರಸ್ತೆ ದುರಸ್ತಿ ಮಾಡದೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆಲಕ್ಷ್ಮಣ ಚೌಡ್ಲಿ ಪಾಮನಕಲ್ಲೂರು ಕರವೇ ಮುಖಂಡ
ಈ ಬಗ್ಗೆ ದೂರುಗಳು ಬಂದಿವೆ. ಗುತ್ತಿಗೆ ಪಡೆದ ಕಂಪನಿ ಮತ್ತು ಪ್ರಾಧಿಕಾರದ ಅಧಿಕಾರಿಗಳಿಗೆ ರಸ್ತೆ ದುರಸ್ತಿಗೆ ಈಗಾಗಲೇ ಸೂಚಿಸಲಾಗಿದೆವೀರಭದ್ರಗೌಡ ಸಹಾಯಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.