ADVERTISEMENT

ಮರಂ ನೀಡಿ ಕೆರೆ ನಿರ್ಮಿಸಿಕೊಂಡ ರೈತರು: ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಜಮೀನು

ಮಂಜುನಾಥ ಎನ್ ಬಳ್ಳಾರಿ
Published 1 ಅಕ್ಟೋಬರ್ 2025, 8:44 IST
Last Updated 1 ಅಕ್ಟೋಬರ್ 2025, 8:44 IST
ಕವಿತಾಳದ ರೈತ ತಾಯಪ್ಪ ಯಾದವ ಅವರು ತಮ್ಮ ಜಮೀನಿನಲ್ಲಿ ಮರಂ ನೀಡಿ ನಿರ್ಮಿಸಿಕೊಂಡ ಕೆರೆ
ಕವಿತಾಳದ ರೈತ ತಾಯಪ್ಪ ಯಾದವ ಅವರು ತಮ್ಮ ಜಮೀನಿನಲ್ಲಿ ಮರಂ ನೀಡಿ ನಿರ್ಮಿಸಿಕೊಂಡ ಕೆರೆ   

ಕವಿತಾಳ: ಹೆದ್ದಾರಿ ನಿರ್ಮಾಣಕ್ಕೆ ಮರಂ ನೀಡಿ ಜಮೀನುಗಳಲ್ಲಿ ಕೆರೆ ನಿರ್ಮಿಸಿಕೊಳ್ಳುವ ಮೂಲಕ ಕೃಷಿ ಚಟುವಟಿಕೆಗೆ ಅಗತ್ಯವಾದ ನೀರಿನ ಸೌಲಭ್ಯ ಮಾಡಿಕೊಂಡು ರೈತರು ಜಾಣತನ ಮೆರೆದಿದ್ದಾರೆ.

ಕೆರೆ ನೀರು ಬಳಸಿ ಭತ್ತ ನಾಟಿ ಮಾಡಿದ ಜಮೀನುಗಳು ಇದೀಗ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.

ಭಾರತ ಮಾಲಾ ಯೋಜನೆಯಡಿ ಬೆಳಗಾವಿ-ರಾಯಚೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಈ ಭಾಗದಲ್ಲಿ ಹಲವು ರೈತರು ತಮ್ಮ ಜಮೀನಿನಲ್ಲಿ ಮರಂ ನೀಡಿ ಕೆರೆ ನಿರ್ಮಿಸಿಕೊಂಡಿದ್ದಾರೆ. ಇದೀಗ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಕೆಲವರು ಭತ್ತ ನಾಟಿ ಮಾಡಿದ್ದರೆ, ಉಳಿದವರು ಹಿಂಗಾರು ಕೃಷಿಗೆ ಹಾಗೂ ಬೇಸಿಗೆ ಅವಧಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ADVERTISEMENT

‘ಅಂದಾಜು ₹5 ಲಕ್ಷದಿಂದ ₹6 ಲಕ್ಷ ಸ್ವಂತ ಹಣ ಖರ್ಚು ಮಾಡಿ ಕೆರೆ ನಿರ್ಮಿಸಿಕೊಳ್ಳುವಷ್ಟು ರೈತರು ಆರ್ಥಿಕವಾಗಿ ಸಮರ್ಥರಿಲ್ಲ. ಹೀಗಾಗಿ ಮರಂ ಬದಲಿಗೆ ಕೆರೆ ನಿರ್ಮಿಸಿಕೊಟ್ಟಿದ್ದು ಉಪಯುಕ್ತವಾಗಿದೆ. ಇದೀಗ ಸ್ವಂತ ಹಣದಲ್ಲಿ ವಿದ್ಯುತ್‌ ಸಂಪರ್ಕ ಪಡೆದುಕೊಂಡು ನೀರು ಬಳಕೆ ಮಾಡುತ್ತಿದ್ದೇವೆ’ ಎಂದು ರೈತ ತಾಯಪ್ಪ ಯಾದವ ತಿಳಿಸಿದರು.

ಕವಿತಾಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂದಾಜು 25ಕ್ಕೂ ಹೆಚ್ಚಿನ ರೈತರು ಹೊಲಗಳಲ್ಲಿ ಕೆರೆ ನಿರ್ಮಿಸಿಕೊಂಡಿದ್ದಾರೆ. ಹಳ್ಳದ ನಾಲಾ ಪ್ರದೇಶದಲ್ಲಿ ನೀರಿನ ಹರಿವನ್ನು ಕೆರೆಗೆ ತಿರುಗಿಸಿಕೊಂಡು ನೀರು ಸಂಗ್ರಹಕ್ಕೆ ಪೂರಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.

‘ಕೆರೆಯಲ್ಲಿ ನೀರು ಸಂಗ್ರಹವಾಗುವುದರಿಂದ ತುರ್ತು ಸಂದರ್ಭದಲ್ಲಿ ಬೆಳೆ ಕಾಪಾಡಲು ಅದನ್ನು ಬಳಸಿಕೊಳ್ಳಬಹುದು ಮತ್ತು ಕೊಳವೆಬಾವಿಯ ಅಂತರ್ಜಲಮಟ್ಟ ಹೆಚ್ಚುತ್ತದೆ. ಮಳೆ ಆಧಾರಿತ ಬೆಳೆ ಬೆಳೆಯುತ್ತಿದ್ದ ತಾವು ಈ ವರ್ಷ ಕೆರೆ ನೀರು ಬಳಸಿಕೊಂಡು ಭತ್ತ ನಾಟಿ ಮಾಡಿದ್ದೇವೆ’ ಎಂದು ರೈತ ಗೋಲಪ್ಪ ಯಾದವ, ಕರಿಯಪ್ಪ ಹೇಳಿದರು.

ಕವಿತಾಳದ ರೈತ ತಾಯಪ್ಪ ಯಾದವ ಕೆರೆ ನೀರು ಬಳಸಿಕೊಂಡು ಭತ್ತ ಬೆಳೆದಿರುವುದು
ತಾಯಪ್ಪ ಯಾದವ
ಎಂಟು ಎಕರೆ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿಕೊಂಡಿದ್ದು ಏಳು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದೇನೆ
ತಾಯಪ್ಪ ಯಾದವ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.