(ಸಾಂದರ್ಭಿಕ ಚಿತ್ರ)
ಗೆಟ್ಟಿ ಚಿತ್ರ
ಕವಿತಾಳ: ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮೀಪದ ಬಾಗಲವಾಡ ಗ್ರಾಮದ ಬಾಣಂತಿ ಚಂದ್ರಕಲಾ (21) ಶುಕ್ರವಾರ ಮೃತಪಟ್ಟಿದ್ದಾರೆ.
ಮಾನ್ವಿಯ ತಾಯಿ ಮಗು ಆಸ್ಪತ್ರೆಯಲ್ಲಿ ಫೆ.14ರಂದು ನಡೆದ ಸಹಜ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಫೆ.16 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಆಗಮಿಸಿದ ನಾಲ್ಕು ದಿನಗಳ ಬಳಿಕ ಬಾಣಂತಿಗೆ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಗ್ರಾಮದ ಆರೋಗ್ಯ ಉಪ ಕೇಂದ್ರದಲ್ಲಿ ನರ್ಸ್ ಮಾತ್ರೆ ನೀಡಿದ್ದರು, ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಫೆ.21 ರಂದು ಮಾನ್ವಿಯ ತಾಯಿ ಮಗು ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು ಆಗ ಅಲ್ಲಿನ ವೈದ್ಯರು ರಿಮ್ಸ್ಗೆ ದಾಖಲಿಸಲು ಶಿಫಾರಸು ಮಾಡಿದ್ದರು. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಬಾಣಂತಿ ಮೃತಪಟ್ಟಿದ್ದಾರೆ.
‘ಹೆರಿಗೆ ಸಂದರ್ಭದಲ್ಲಿ ಉಂಟಾದ ರಕ್ತಸ್ರಾವ ನಿಯಂತ್ರಣಕ್ಕೆ ಇಡಲಾಗಿದ್ದ ಹತ್ತಿ (ಕಾಟನ್) ತೆಗೆಯದೆ ತಾಯಿ ಮಗು ಆಸ್ಪತ್ರೆ ವೈದ್ಯರು ನಿರ್ಲಕ್ಷ ಮಾಡಿದ್ದಾರೆ. ಈ ಬಗ್ಗೆ ರಿಮ್ಸ್ ವೈದ್ಯರು ತಮಗೆ ಮಾಹಿತಿ ನೀಡಿದ್ದಾರೆ, ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ ನಮ್ಮ ಪುತ್ರಿಯ ಸಾವಿಗೆ ಕಾರಣ’ ಎಂದು ಮೃತಳ ತಂದೆ ಫಕೀರಪ್ಪ ಚಾಗಿ ಆರೋಪಿಸಿದರು.
‘ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವ ಉಂಟಾಗಿಲ್ಲ, ಗ್ರಾಮದಲ್ಲಿ ನರ್ಸ್ ತಪಾಸಣೆ ಮಾಡಿದಾಗ ಕಾಟನ್ ಕಂಡು ಬಂದಿಲ್ಲ, ಬಾಣಂತಿಯ ಆರೋಗ್ಯ ಸ್ಥಿತಿ ಬಗ್ಗೆ ನಿತ್ಯ ಮಾಹಿತಿ ಪಡೆಯಲಾಗಿತ್ತು. (ಸೆಪ್ಸಿಸ್) ಅತಿಯಾದ ಸೋಂಕಿನಿಂದ ಚಿಕಿತ್ಸೆಗೆ ಸ್ಪಂದಿಸಿಲ್ಲ ಎನ್ನಲಾಗಿದೆ ವೈದ್ಯರ ನಿರ್ಲಕ್ಷ ಕಂಡು ಬರುತ್ತಿಲ್ಲ, ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಮಾನ್ವಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವರಾಜಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.