
ಕವಿತಾಳ: ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜಮೀನುಗಳು ಜಲಾವೃತಗೊಂಡಿವೆ. ಹಳ್ಳಿಗಳಲ್ಲಿನ ಒಳ ರಸ್ತೆಗಳು ಕೆಸರುಮಯವಾಗಿ ಸಂಚಾರಕ್ಕೆ ಪರದಾಡುವಂತಾಗಿದೆ.
ಧಾರಾಕಾರ ಮಳೆಯಿಂದ ಸಮೀಪದ ಹುಸೇನಪುರ ಗ್ರಾಮದ ಹಳ್ಳ ತುಂಬಿ ಹರಿದಿದೆ. ಗ್ರಾಮದ ದುರುಗಮ್ಮ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಚರಂಡಿ ತುಂಬಿ ಹರಿದು ರಸ್ತೆಯಲ್ಲಿ ನೀರು ನಿಂತು ಗಲೀಜು ಉಂಟಾಗಿದೆ. ಹೀಗಾಗಿ ಸಾರ್ವಜನಿಕರು ಓಡಾಟಕ್ಕೆ ತೊಂದರೆ ಅನುಭವಿಸಿದರು.
ಸೈದಾಪುರ, ಗುಡದಿನ್ನಿ, ಕೆ.ತಿಮ್ಮಾಪುರ, ತೊಪ್ಪಲದೊಡ್ಡಿ, ಚಿಂಚಿರಿಕಿ, ಪಾತಾಪುರ, ಹಣಿಗಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಮೊದಲ ಮಳೆಗೆ ಬಿತ್ತನೆ ಮಾಡಿದ ರೈತರು ಬಿತ್ತನೆ ನಂತರ ಮಳೆಯಾಗಿದ್ದರಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಭೂಮಿ ಹದವಾಗಿದ್ದು, ಸ್ವಲ್ಪ ತೇವಾಂಶ ಕಡಿಮೆಯಾದ ನಂತರ ಬಿತ್ತನೆ ಮುಂದುವರಿಸಬಹುದು ಎಂದು ರೈತ ಮೌನೇಶ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.