ರಾಯಚೂರು: ‘ಇತಿಹಾಸ ಹಾಗೂ ಚರಿತ್ರೆಯನ್ನು ನಮ್ಮ ಗುರುತು, ಸಂಸ್ಕಾರವನ್ನು ಪ್ರೇರಣೆಯಾಗಿ ಪಡೆಯಬೇಕು. ಇತಿಹಾಸವನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ಮಾಡಿಕೊಳ್ಳಬೇಕಿದ್ದು, ಅದರಲ್ಲಿ ವಿಫಲರಾಗಿದ್ದೇವೆ’ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹರೀಶ ರಾಮಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಮತ್ತು ಸಮಾಜಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ 'ಕಲ್ಯಾಣ ಕರ್ನಾಟಕ ಇತಿಹಾಸ ಮತ್ತು ಸಾಮಾಜಿಕ ಬೆಳವಣಿಗೆ' ವಿಷಯ ಕುರಿತ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸೀಮಿತ ವ್ಯಾಪ್ತಿಗೆ ಒಳಪಡುತ್ತಿದೆ. ಪ್ರಶ್ನಿಸುವ ಬಾಯಿಗಳನ್ನು ಮುಚ್ಚಿಸುವ ಮನೋಭಾವನೆ ಸಲ್ಲದು. ಇದು ಬದಲಾಗಬೇಕು. ಬೇಡಿಕೆಗಳು ಹೆಚ್ಚಾದಾಗ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಇತಿಹಾಸವನ್ನು ನಮ್ಮ ವೈಯಕ್ತಿಕ ಮತ್ತು ಸಮಾಜದ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬಹುದು. ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡದಿದ್ದರೆ ಬದಲಾವಣೆ ಅಸಾಧ್ಯ. ಕಲ್ಯಾಣ ಕರ್ನಾಟಕ ಭಾಗಕ್ಕೆ ಭವ್ಯವಾದ ಇತಿಹಾಸವಿದೆ. ಈ ಭಾಗದಲ್ಲಿ ಅನೇಕ ಮಹನೀಯರು ಆಗಿಹೋಗಿದ್ದಾರೆ. ಆದರೆ ನಮಗೆ ಅರಿವೇ ಇಲ್ಲ. ಕೀಳರಿಮೆ ಮತ್ತು ದಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ಇದು ಹಿಂದುಳಿಯಲು ಕಾರಣ. ಬೇಡಿಕೆಗಳಿಗೆ ಸ್ಪಂದಿಸದ ವ್ಯಕ್ತಿಯ ಪೂಜೆ, ಅಭಿವೃದ್ಧಿಗೆ ಮುಂದಾಗದೇ ಇರುವವರನ್ನು ಎಲ್ಲಿಯವರೆಗೆ ಕೊಂಡಾಡುತ್ತೇವೋ ಅಲ್ಲಿಯವರೆಗೆ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಶರಣಬಸವ ಪಾಟೀಲ ಜೋಳದಹೆಡಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿದ್ದರಿಂದ 371(ಜೆ) ಕಲಂ ಜಾರಿಗೊಳಿಸಲಾಗಿದೆ. ಇದರ ಸಮಗ್ರ ಬಳಕೆ ಆಗುತ್ತಿಲ್ಲ. ಕೀಳರಮೆಯಿಂದ ಹೊರಬಂದು ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಆರ್. ಮಲ್ಲನಗೌಡ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಜೆ.ಎಲ್.ಈರಣ್ಣ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.