ADVERTISEMENT

‘ಗಾಯನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ’

28ರಂದು ಜಿಲ್ಲೆಯಾದ್ಯಂತ ಕೋಟಿ ಕಂಠ ಗೀತಗಾಯನ, ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 6:35 IST
Last Updated 20 ಅಕ್ಟೋಬರ್ 2022, 6:35 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್‌.ದುರುಗೇಶ್‌ ಮಾತನಾಡಿದರು
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್‌.ದುರುಗೇಶ್‌ ಮಾತನಾಡಿದರು   

ರಾಯಚೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ಅಕ್ಟೋಬರ್‌ 28ರಂದು ಜಿಲ್ಲೆಯಾದ್ಯಂತ ಆಯ್ದ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕೋಟಿ ಕಂಠ ಗಾಯನದ ‘ನನ್ನ ನಾಡು, ನನ್ನ ಹಾಡು ಅಭಿಯಾನ’ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕಳೆದ ವರ್ಷ ಲಕ್ಷ ಕಂಠ ಗಾಯನ ಶಿರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಲಾಗಿತ್ತು. ಪ್ರಸಕ್ತ ವರ್ಷವೂ ಕೋಟಿ ಕಂಠ ಗಾಯನ ಶಿರ್ಷಿಕೆಯಡಿ ಸರ್ಕಾರದಿಂದ ಕಾರ್ಯಕ್ರಮ ನಡೆಸಲಾಗುತ್ತದೆ. ಕಾರ್ಯಕ್ರಮ ಯಶಸ್ಸಿಗೆ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಜಿಲ್ಲಾ ಮಹಾತ್ಮಗಾಂಧಿ ಹಾಗೂ ಆಯಾ ತಾಲ್ಲೂಕು ಕ್ರೀಡಾಂಗಣ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಕಾರ್ಯಾಲಯ, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು, ಜಿಲ್ಲಾ ಕಾರ್ಯಾಗೃಹ, ಕೃಷಿ ವಿದ್ಯಾಲಯ, ರಿಮ್ಸ್ ಹಾಗೂ ಐತಿಹಾಸಿಕ ಸ್ಥಳಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೋಟಿ ಕಂಠಗಾಯನ ಕಾರ್ಯಕ್ರಮ ನಡೆಯಲಿದೆ. ಇದು ರಾಜ್ಯದಾದ್ಯಂತ ಏಕಕಾಲದಲ್ಲಿ ನಡೆಯುವ ಕಾರ್ಯಕ್ರಮವಾಗಿದ್ದು, ಅಂದು
ಬೆಳಿಗ್ಗೆ 11ಗಂಟೆಗೆ ಕಾರ್ಯಕ್ರಮ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಂದು ನಡೆಯುವ ಸಮೂಹ ಗೀತಗಾಯನದಲ್ಲಿ ಕುವೆಂಪು ಅವರಿಂದ ರಚಿತವಾದ ನಾಡಗೀತೆ, ಹುಯಿಲಗೋಳ ನಾರಾಯಣರಾಯರ ಉದವಾಗಲಿ ನಮ್ಮ ಚೆಲುವ ಕನ್ನಡನಾಡು, ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ, ನಾಡೋಜ ಡಾ.ಚೆನ್ನವೀರ ಕಣವಿಯವರ ವಿಶ್ವವಿನೂತ ವಿದ್ಯಾಚೇತನ ಹಾಗೂ ಡಾ.ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಹಾಡಲಾಗುತ್ತಿದೆ ಎಂದರು.

ಜಿಲ್ಲೆಯಾದ್ಯಂತ ನಡೆಯಲಿರುವ ಹಮ್ಮಿಕೊಂಡ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ವೈಯಕ್ತಿಕ ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಬಹುದಾಗಿದ್ದು, ಆಸಕ್ತರು ಆನ್‌ಲೈನ್ ಲಿಂಕ್ https://kannadasiri.karnataka.gov.in/kkg/public/ ಮೂಲಕ ಅಕ್ಟೋಬರ 28 ರೊಳಗಾಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಸ್ವಯಂ ಚಾಲಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಆನ್‌ಲೈನ್ ಪ್ರಮಾಣ ಪತ್ರ ಸಹ ನೀಡಲಾಗುತ್ತಿದೆ.

ವಿವಿಧ ಇಲಾಖೆಗಳಿಂದ ನೋಂದಣಿ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಂದ ಒಂದು ಲಕ್ಷ, ಪದವಿ ಪೂರ್ವ ಕಾಲೇಜಗಳಿಂದ 50 ಸಾವಿರ, ಪ್ರಥಮ ದರ್ಜೆ ಕಾಲೇಜಗಳಿಂದ 5ಸಾವಿರ, ಕಲಾವಿದರು ಅಥವಾ ಸಾಹಿತಿಗಳಿಂದ 10ಸಾವಿರ, ಕನ್ನಡ ಪರ ಸಂಘಟನೆಗಳಿಂದ 5ಸಾವಿರ, ಸರ್ಕಾರಿ ನೌಕರರಿಂದ 20ಸಾವಿರ, ಜಿಲ್ಲಾ ಕಾರಾಗೃಹದಿಂದ 250, ಕೃಷಿ ವಿಶ್ವವಿದ್ಯಾಲಯದಿಂದ 5ಸಾವಿರ, ರಿಮ್ಸ್ ಆಸ್ಪತ್ರೆಯಿಂದ 2ಸಾವಿರ, ಶಿಲ್ಪಾ ಮೆಡಿಕೇರ್ ದಿಂದ 1ಸಾವಿರ, ಸಣ್ಣ ಕೈಗಾರಿಕಾ ಅಥವಾ ವ್ಯಾಪಾರಿಗಳಿಂದ 50ಸಾವಿರ, ತಾರಾನಾಥ ಶಿಕ್ಷಣ ಸಂಸ್ಥೆಯಿಂದ 3ಸಾವಿರ, ಜಿಲ್ಲಾ ಮಹಿಳಾ ಸ್ವ-ಸಹಾಯ ಸಂಘಗಳಿಂದ 20ಸಾವಿರ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯಿಂದ 2ಸಾವಿರ, ಲೀಡ್ ಬ್ಯಾಂಕ್ ನಿಂದ 20ಸಾವಿರ, ವಿವಿಧ ಸಂಘಟನೆಗಳಿಂದ 1ಸಾವಿರ, ಮಂಗಳ ಮುಖಿಯರಿಂದ 1ಸಾವಿರ, ನಗರಸಭೆಯಿಂದ 50ಸಾವಿರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 5ಸಾವಿರ, ತಹಸೀಲ್ದಾರ್ ಕಚೇರಿಯಿಂದ 50ಸಾವಿರ ಹಾಗೂ ಎಲ್ಲಾ ಇಲಾಖೆ ಅಧಿಕಾರಿಗಳಿಂದ ಮತ್ತು ಸಿಬ್ಬಂದಿಯಿಂದ 50ಸಾವಿರ ಸೇರಿದಂತೆ ಒಟ್ಟು 4ಲಕ್ಷ ಜನಸಂಖ್ಯೆ ಕೋಟಿ ಕಂಠ ಗೀತ ಗಾಯನ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವಿ.ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಬೇಂದ್ರಯ್ಯ ಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಂದ್ರ ಜಲ್ದಾರ್, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ್ ನಾಯಕ,
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಕೀರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮನ್ಸೂರು ಅಹ್ಮದ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.