ADVERTISEMENT

ತಾಯಿ, ಮಕ್ಕಳ ಪೋಷಣೆ ಅಗತ್ಯ: ರಾಜಾ ಅಮರೇಶ್ವರ ನಾಯಕ

ರಾಷ್ಟ್ರೀಯ ಪೋಷಣಾ ಮಾಸಾಚರಣೆ ಹಾಗೂ ಮಾತೃ ವಂದನಾ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 13:49 IST
Last Updated 1 ಸೆಪ್ಟೆಂಬರ್ 2021, 13:49 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣಾ ಮಾಸಾಚರಣೆ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿದರು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣಾ ಮಾಸಾಚರಣೆ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿದರು   

ರಾಯಚೂರು: ಗರ್ಭಿಣಿಯರು ಹಾಗೂ ಜನಿಸುವ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕುಪೋಷಣ ಅಭಿಯಾನ ಜಾರಿಗೆ ತಂದಿದ್ದು, ಇಲಾಖೆಯ ಅಧಿಕಾರಿಗಳು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿ ಶೇ 100 ರಷ್ಟು ಅನುಷ್ಠಾನಗೊಳಿಸಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣಾ ಮಾಸಾಚರಣೆ 2021 ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಯಾವುದೇ ದೇಶ ಸದೃಢ ಆಗಬೇಕಾದರೆ ಸ್ತ್ರೀಯರು ಆರೋಗ್ಯವಾಗಿರಬೇಕು. ‌ಮಕ್ಕಳು ಸದೃಢವಾಗಿರಬೇಕು. ಇದಕ್ಕೆ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ ಅಗತ್ಯವಾಗಿದೆ. ಆರೋಗ್ಯವಂತ ಮಗು ಹುಟ್ಟಿದರೆ ಆರೋಗ್ಯವಂತ ಸಮಾಜ ಸೃಷ್ಠಿ ಆಗಲಿದೆ. ತಾಯಿ, ಮಕ್ಕಳ ಆರೋಗ್ಯ ಕಾಪಾಡಲು ಕೇಂದ್ರ ಸರ್ಕಾರ ಕುಪೋಷಣ ಅಭಿಯಾನ ಜಾರಿಗೆ ತಂದಿದೆ. ರಾಯಚೂರು, ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಹೆಚ್ಚು ಕಾಡುತ್ತಿದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನದಟ್ಟು ಮಾಡಿದ್ದು ಅವರು ಈ ಜಿಲ್ಲೆಗಳಲ್ಲಿ ಮಾತೃವಂದನ ಹಾಗೂ ಪೋಷಣ ಅಭಿಯಾನ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಿದ್ದಾರೆ ಎಂದರು.

ADVERTISEMENT

ಮಕ್ಕಳು ‌ಭಾವಿ ಪ್ರಜೆಗಳಾಗಿದ್ದು‌ ಅವರ‌ ಪೊಷಣೆಗೆ‌ ಹೆಚ್ಚಿ‌ನ ಯೋಜನೆ ತರಬೇಕಿದೆ. ಮುಂದಿನ ದಿನಗಳಲ್ಲಿ ‌ಅಪೌಷ್ಟಿಕತೆ ಸಮಗ್ರ ನಿರ್ಮೂಲನೆಗೆ ಸರ್ಕಾರ, ಸ್ಥಳೀಯ ಆಡಳಿತ ಹಾಗೂ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ಹೇಳಿದರು.

ಯಾದಗಿರಿ ಹಾಗೂ ರಾಯಚೂರು ಮಹತ್ವಾಕಾಂಕ್ಷೆಯ ‌ಜಿಲ್ಲೆ ಎಂದು ಘೋಷಣೆ ಮಾಡಿದ್ದು‌, ಪ್ರತಿಮನೆಗೂ ನಲ್ಲಿ ಜೋಡಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ₹1,500 ಕೋಟಿಯ ಟೆಂಡರ್ ಮೂಲಕ ಘರ್‌ಘರ್ ಜಲ್ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಹಾಗೂ‌ ಪ್ರಧಾನ‌ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ‌ ಮಾತನಾಡಿ, ತಾಯಂರಿರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮಕ್ಕಳ ‌ದೈಹಿಕ ಹಾಗೂ ಮಾನಸಿಕವಾಗಿ‌ ಸದೃಢವಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ಸತೀಶ‌‌ ಬಿ.ಸಿ ಮಾತನಾಡಿ, 18 ವರ್ಷ ತುಂಬಿದ ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು. ಮೂರನೇ ಅಲೆ ತಡೆಯಲು ‌ಲಸಿಕೆಯೊಂದೇ ಅಸ್ತ್ರ‌. ಆರೋಗ್ಯ ಇಲಾಖೆಯಿಂದ ಮನೆಮನೆಗೆ ಬಂದು ಲಸಿಕೆ ಹಾಕಲಿದ್ದು ಮಹಿಳೆಯರು ಲಸಿಕೆ ಹಾಕಿಸಿಕೊಂಡು ತಮ್ಮ ಕುಟುಂಬ ಸದಸ್ಯರಿಗೂ ಲಸಿಕೆ ಹಾಕಿಸಬೇಕು ಎಂದರು.

ಪ್ಲಾಸ್ಟಿಕ್ ‌ಬಳಕೆ‌ಯನ್ನು ಸರ್ಕಾರ ನಿಷೇಧಿಸಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಜಾಗೃತಿ ಮೂಡಿಸಬೇಕು.‌ ಆರೋಗ್ಯ, ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ ಪ್ರತಿ ಅಂಗನವಾಡಿ ಕೇಂದ್ರ, ಶಾಲೆ, ಸರ್ಕಾರಿ ಕಟ್ಟಡಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ‌ನೀರು ನೀಡಲು ಗ್ರಾಮ ಪಂಚಾಯಿತಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಮದ್ ಅಲಿ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾ ನಿರ್ದೇಶಕ ಡಾ. ಟಿ. ರೋಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.