ADVERTISEMENT

ಕಲಿಕೆಯಿಂದ ವ್ಯಕ್ತಿತ್ವ ರೂಪಿಸಿಗೊಳ್ಳಲಿ: ಐಎಎಸ್ ಅಧಿಕಾರಿ ಆರ್. ಸುಹಾಸ್

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 14:15 IST
Last Updated 13 ಸೆಪ್ಟೆಂಬರ್ 2021, 14:15 IST
ರಾಯಚೂರು ನಗರದ ರೇಸ್ ಚಾಣಕ್ಯ ಶಾಲೆಯಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೂತನ ಐಎಎಸ್‌ ಅಧಿಕಾರಿ ಆರ್‌.ಸುಹಾಸ್‌ ಅವರನ್ನು ರೇಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸಾವಿತ್ರಿ ಪುರುಷೋತ್ತಮ, ರೇಸ್ ಸಂಸ್ಥೆಯ ನಿರ್ದೇಶಕ ಶೆಟ್ಟಿ ನಾಗರಾಜ ಸನ್ಮಾನಿಸಿದರು
ರಾಯಚೂರು ನಗರದ ರೇಸ್ ಚಾಣಕ್ಯ ಶಾಲೆಯಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೂತನ ಐಎಎಸ್‌ ಅಧಿಕಾರಿ ಆರ್‌.ಸುಹಾಸ್‌ ಅವರನ್ನು ರೇಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸಾವಿತ್ರಿ ಪುರುಷೋತ್ತಮ, ರೇಸ್ ಸಂಸ್ಥೆಯ ನಿರ್ದೇಶಕ ಶೆಟ್ಟಿ ನಾಗರಾಜ ಸನ್ಮಾನಿಸಿದರು   

ರಾಯಚೂರು: ಕಲಿಕೆಯು ಅಂಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಲಿ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಅವರಿಗೆ ಪ್ರೊತ್ಸಾಹಿಸುವುದು ಅವಶ್ಯವಾಗಿದೆ ಎಂದು ಐಎಎಸ್ ಅಧಿಕಾರಿ ಆರ್. ಸುಹಾಸ್ ಹೇಳಿದರು.

ನಗರದ ರೇಸ್ ಚಾಣಕ್ಯ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಸಂವಾದದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕಲಿಕೆಯ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಿಳಿ ಹೇಳಿದರೆ ಅವರಿಗೇನು ಗೊತ್ತಾಗುತ್ತದೆ ಎಂದು ಶಿಕ್ಷಕರೇ ನಿರ್ಧರಿಸಬಾರದು. ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸಮಗ್ರ ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳ ಬಗ್ಗೆ, ಸಂವಿಧಾನದ ಬಗ್ಗೆ , ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದು ಬಹಳ ಅಗತ್ಯವಾಗಿದೆ ಎಂದರು.

ADVERTISEMENT

ಮಾರುಕಟ್ಟೆಯಲ್ಲಿ ಯಾವ ವಸ್ತುಗಳ ಬೆಲೆ ಎಷ್ಟು ಎಂದು ಮಕ್ಕಳಿಗೆ ಮಾಹಿತಿ ನೀಡಬೇಕು. ಅವರೆನು ದಿನಸಿ ,ತರಕಾರಿ ತಂದು ಹಾಕುತ್ತಾರೆಯೇ ಎನ್ನುವ ಭಾವನೆ ಬೇಡ. ಅವರಿಗೆ ದೇಶದ ಆರ್ಥಿಕ ಪರಿಸ್ಥಿತಿ ಗಿಂತ ಮನೆಯ ಕೌಟುಂಬಿಕ ಆರ್ಥಿಕ ಸ್ಥಿತಿಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿ ಆಗುತ್ತದೆ ಎಂದರು.

ಸಸಿಗಳನ್ನು ಬೆಳೆಸುವುದು, ಪರಿಸರ ರಕ್ಷಣೆ, ಸ್ವಚ್ಚತೆ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ , ನಿಷೇಧದ ಬಗ್ಗೆ ಮತ್ತು ಮರು ಬಳಕೆಯ ವಿಧಾನದ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕಾಗಿದೆ. ಎಲ್ಲಾ ರಂಗದಲ್ಲಿ ಪೈಪೋಟಿ ಇದೆ. ಮಕ್ಕಳನ್ನು ಕೇವಲ ಅಂಕ ಗಳಿಸುವುದಕ್ಕೆ, ಉದ್ಯೋಗ ಮಾಡುವುದಕ್ಕಾಗಿ ಶಿಕ್ಷಣ ಕೊಡಿಸಬಾರದು. ಅವರು ಯಾವುದೇ ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಬೆಳಸಬೇಕು. ಸ್ವಾವಲಂಬಿಯಾಗಿ ಸ್ವತಂತ್ರ ಜೀವನ ನಡೆಸುವ ಶಿಕ್ಷಣ ಮತ್ತು ಮಾರ್ಗದರ್ಶನ ಅವಶ್ಯಕತೆ ಇದೆ. ಕಲೆ ,ನೃತ್ಯ, ಸಂಗೀತ, ಕ್ರೀಡೆ ಇವು ಸಹ ಶಿಕ್ಷಣದ ಒಂದು ಭಾಗವಾಗಿದೆ. ಹೀಗಾಗಿ ಮಕ್ಕಳಲ್ಲಿ ಆಸಕ್ತಿ ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಪ್ರತಿಭೆಗಳೇ ಮಿಂಚುತ್ತಿದ್ದಾರೆ ಎಂದು ಹೇಳಿದರು.

10ನೇ ತರಗತಿ ನಂತರ ಮುಂದಿನ ಗುರಿ ಇಟ್ಟುಕೊಂಡು ಪಿಯುಸಿ , ಪದವಿ ಶಿಕ್ಷಣ ಪಡೆಯಬೇಕು. ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಬಿಎಸ್ಸಸ್ಸಿ , ವೈದ್ಯಕೀಯ, ಎಂಜಿನಿಯರಿಂಗ್ ಅಬ್ಯಾಸಿಸದೇ ಬಿ ಎ - ಬಿಕಾಂ ಪದವಿ ಪಡೆಯುತ್ತಿದ್ದಾರೆ. ಹೀಗಾಗಿ ಪೂರಕ ಶಿಕ್ಷಣ ಪಡೆಯುವುದು ಅವಶ್ಯವಾಗಿದೆ.

ಐಎಎಸ್ ಅಂದರೆ ಬಹುತೇಕ ವಿದ್ಯಾರ್ಥಿಗಳು ಅದೊಂದು ದೊಡ್ಡ ಶಿಕ್ಷಣ ಕಷ್ಟಕರ ಎಂದು ಭಾವಿಸುತ್ತಾರೆ. ಆದರೆ ಐಎಎಸ್ ಕಲಿಕೆಗೆ ಇಚ್ಛಾಶಕ್ತಿ , ಶ್ರದ್ಧೆಯಿಂದ ಓದಿದರೆ ಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳು ಸಹ ಐಎಎಸ್, ಐಪಿಎಸ್ ನಂತಹ ಪದವಿ ಹೊಂದಬಹುದು. ನಾನು ಸಹ ಸಾಮಾನ್ಯ ಕುಟುಂಬದಿಂದ ಬಂದಿರುತ್ತೇನೆ. 10ನೇ ತರಗತಿಯಲ್ಲಿ ಶೇ 68, ಪಿಯುಸಿಯಲ್ಲಿ ಶೇ 72 ಅಂಕಗಳನ್ನು ಪಡೆದುಕೊಂಡಿದ್ದೇನೆ. ನಾನು ಐಎಎಸ್ ಹೇಗೆ ಪಾಸಾಗುತ್ತೇನೆ ಎಂದು ಬಿಟ್ಟಿದ್ದರೆ ನನಗೆ ಈ ಒಂದು ಉನ್ನತ ಪದವಿ ದೊರೆಯುತ್ತಿರಲಿಲ್ಲ. ಯಾವುದೇ ಪರೀಕ್ಷೆಗಳಿರಲಿ ನಿರಂತರ ಅಧ್ಯಯನ, ಕಠಿಣ ಪರಿಶ್ರಮ ಇದ್ದರೆ ಯಶಸ್ಸು ಸಾಧ್ಯ ಎಂದರು.

ರೇಸ್ ಚಾಣಕ್ಯ ಶಾಲೆಯ ಅಧ್ಯಕ್ಷ ಡಾ. ವಿ.ಶ್ರೀಧರ್ ರೆಡ್ಡಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಊರ್ವ ತಯಾರಿ ಮಾಹಿತಿ ನೀಡಲು ಐಎಎಸ್ ಅಧಿಕಾರಿಯಾದ ಸುಹಾಸ್ ರವರನ್ನು ಆಹ್ವಾನಿಸಲಾಗಿದೆ ಎಂದರು.
ರೇಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸಾವಿತ್ರಿ ಪುರುಷೋತ್ತಮ, ರೇಸ್ ಸಂಸ್ಥೆಯ ನಿರ್ದೇಶಕ ಶೆಟ್ಟಿ ನಾಗರಾಜ, ಮುಖ್ಯಗುರು ವಿ.ಪರಿಮಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.