
ಲಿಂಗಸುಗೂರು: ಪಟ್ಟಣದಲ್ಲಿನ ಹಳೆ ಕೋರ್ಟ್ ಕಟ್ಟಡಕ್ಕೆ ಪಟ್ಟಣದಿಂದ 3 ಕಿ.ಮೀ ದೂರವಿರುವ ತಾಲ್ಲೂಕು ಆಡಳಿತಸೌಧ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ.
ಈಗಿನ ಸಹಾಯಕ ಆಯುಕ್ತರ ಕಚೇರಿ ಕಟ್ಟಡದ ಪಕ್ಕದಲ್ಲಿ ತಹಶೀಲ್ದಾರ್ ಕಚೇರಿ, ಭೂಮಾಪನ, ಭೂಮಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಕಚೇರಿಗಳು ಸೇರಿ ಸಬ್ರಜಿಸ್ಟ್ರಾರ್ ಕಚೇರಿ, ಉಪ ಖಜಾನೆ ಒಂದೇ ಸೂರಿನಡಿಯಲ್ಲಿ ಕಾರ್ಯನಿರ್ವಹಿಸಲು 2010ರಲ್ಲಿ ಪಟ್ಟಣ ಹಾಗೂ ಕಸಬಾಲಿಂಗಸುಗೂರು ಮಧ್ಯಭಾಗದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆರೇಳು ವರ್ಷಗಳ ಬಳಿಕ ಉದ್ಘಾಟನೆಗೊಂಡ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ ಕಚೇರಿ, ಭೂಮಾಪನ, ಭೂಮಿ ಕೇಂದ್ರಗಳನ್ನು ಸ್ಥಳಾಂತರ ಮಾಡಲಾಯಿತು. ಸಬ್ರಜಿಸ್ಟ್ರಾರ್ ಕಚೇರಿ ಹಾಗೂ ಉಪ ಖಜಾನೆ ಕಚೇರಿಗಳನ್ನು ಸ್ಥಳಾಂತರ ಮಾಡದೇ ಹಾಗೇ ಉಳಿಸಲಾಯಿತು.
ತೊಂದರೆ: ತಾಲ್ಲೂಕು ಆಡಳಿತಸೌಧ ಪಟ್ಟಣದಿಂದ 3 ಕಿ.ಮೀ ದೂರದಲ್ಲಿದ್ದು. ಕಂದಾಯ, ಭೂ ಸರ್ವೆ ಇತರೆ ಕೆಲಸಗಳಿಗಾಗಿ ಸಾರ್ವಜನಿಕರು ಅಲ್ಲಿಗೆ ಆಟೊದಲ್ಲಿ ತೆರಳಲು ನೂರಾರು ರೂಪಾಯಿ ಖರ್ಚು ಮಾಡಬೇಕಾದ ಸ್ಥಿತಿ ಇದೆ. ಅಂಗವಿಕಲರು, ವೃದ್ಧರು, ಮಹಿಳೆಯರು ಆಡಳಿತಸೌಧಕ್ಕೆ ತೆರಳಲು ತೊಂದರೆ ಪಡುವಂತಾಗಿದೆ. ಆಡಳಿತಸೌಧದ ಹತ್ತಿರ ಜೆರಾಕ್ಸ್ ಹಾಗೂ ಕಂಪ್ಯೂಟರ್ ಕೇಂದ್ರಗಳು, ಹೋಟೆಲ್ ಇಲ್ಲದಿರುವದರಿಂದ ಪ್ರತಿಯೊಂದು ಕೆಲಸಕ್ಕೂ ಬಸ್ ನಿಲ್ದಾಣಕ್ಕೇ ಬರಬೇಕು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನಲೆಯಲ್ಲಿ ಪಟ್ಟಣದ ಮಧ್ಯಭಾಗದಲ್ಲಿ ಪ್ರವಾಸಿಮಂದಿರದಲ್ಲಿ ಸಂಸತ್ ಮಾದರಿಯಲ್ಲಿ ಹೊಸ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಹಿಂದಿನ ಶಾಸಕ ಹೂಲಗೇರಿ ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಹಳೆ ಕೋರ್ಟ್: ತಾಲ್ಲೂಕು ನ್ಯಾಯಾಲಯಕ್ಕಾಗಿ ಪಟ್ಟಣದ ಸಾರಿಗೆ ಘಟಕದ ಎದುರು ಹೊಸ ಕಟ್ಟಡ ನಿರ್ಮಾಣ ಮಾಡಿದ್ದರಿಂದ ಈಗಾಗಲೇ ಹೊಸ ಕಟ್ಟಡದಲ್ಲಿ ನ್ಯಾಯಾಲಯದ ಕಲಾಪಗಳು ನಡೆಯುತ್ತಿದ್ದು, ಹಳೆಯ ಕೋರ್ಟ್ ಕಟ್ಟಡ ಸದ್ಯಕ್ಕೆ ಖಾಲಿಯಿದ್ದು ಅಲ್ಲಿಗೆ ತಾಲ್ಲೂಕು ಆಡಳಿತ ಸೌಧ ಸ್ಥಳಾಂತರ ಮಾಡುವಂತೆ ವಿವಿಧ ಸಂಘಟನೆಗಳು ಹೋರಾಟ ಮಾಡಿದ ಫಲವಾಗಿ ಶಾಸಕ ಮಾನಪ್ಪ ವಜ್ಜಲ್ ಅವರು ಜ.7ರಂದು ನ್ಯಾಯಾಂಗ ಇಲಾಖೆಗೆ ಪತ್ರ ಬರೆದಿದ್ದರು.
ಹೈಕೋರ್ಟ್ನಿಂದ ಪತ್ರ: ಹಳೆ ಕೋರ್ಟ್ ಕಟ್ಟಡಕ್ಕೆ ತಾಲ್ಲೂಕು ಆಡಳಿತಸೌಧ ಸ್ಥಳಾಂತರ ಮಾಡುವಂತೆ ನ್ಯಾಯಾಂಗ ಇಲಾಖೆಗೆ ಶಾಸಕ ವಜ್ಜಲ್ ಮನವಿ ಪತ್ರ ಸಲ್ಲಿಸಿದ್ದರಿಂದ ಸ್ಥಳಾಂತರ ಮಾಡುವ ಬಗ್ಗೆ ಸೂಕ್ತ ಅಭಿಪ್ರಾಯ ತಿಳಿಸುವಂತೆ ಹೈಕೋರ್ಟ್ ರಜಿಸ್ಟರ್ ಜನರಲ್ ಕೆ.ಎಸ್.ಭರತ್ ಕುಮಾರ ಫೆ.9ರಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.
‘ಹಳೆ ಕೋರ್ಟ್ ಕಟ್ಟಡಕ್ಕೆ ತಾಲ್ಲೂಕು ಆಡಳಿತಸೌಧ ಸ್ಥಳಾಂತರ ಮಾಡಲು ಅಭಿಪ್ರಾಯ ತಿಳಿಸುವಂತೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ತಾಲ್ಲೂಕಿನ ನ್ಯಾಯಾಧೀಶರಿಗೆ ಪತ್ರ ಬರೆದ್ದರಿಂದ, ಹಿರಿಯ ಶ್ರೇಣಿ ನ್ಯಾಯಾಧೀಶರೊಂದಿಗೆ ಚರ್ಚಿಸಿ ಹಳೆ ಕೋರ್ಟ್ ಕಟ್ಟಡವನ್ನು ತಾಲ್ಲೂಕು ಆಡಳಿತಸೌಧಕ್ಕೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಅದರ ಬದಲಾಗಿ ಹೊಸ ಕೋರ್ಟ್ ಪಕ್ಕದಲ್ಲಿ ಜಿಲ್ಲಾ ನ್ಯಾಯಾಧೀಶರ ವಸತಿ ಗೃಹ ನಿರ್ಮಾಣಕ್ಕಾಗಿ ಒಂದು ಎಕರೆ ಜಾಗ ನೀಡುವಂತೆ ಮನವಿ ಮಾಡಲಾಗಿದೆ’ ಎಂದು ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಭೂಪನಗೌಡ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.