ಲಿಂಗಸುಗೂರು: ‘ನನ್ನ ಪತಿ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸದೇ ನಮ್ಮ ಮೇಲೆ ಹಲ್ಲೆ ಮಾಡಿ ಸುಳ್ಳು ಕೇಸ್ ಹಾಕಿದ ಮುದಗಲ್ ಪಿಎಸ್ಐ ವೆಂಕಟೇಶ ಮಾಡಗೇರಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು’ ಎಂದು ಮಟ್ಟೂರು ತಾಂಡ ನಿವಾಸಿ ಸಕ್ಕುಬಾಯಿ ರಾಮಪ್ಪ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಪತಿ ರಾಮಪ್ಪ ಅವರ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿದ್ದರಿಂದ 11 ಜನರ ವಿರುದ್ಧ 2025 ಆಗಸ್ಟ 29ರಂದು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸದೇ ನಮ್ಮ ವಿರುದ್ಧವೇ ಪ್ರತಿದೂರು ನೀಡುವಂತೆ ಆರೋಪಿತರಿಗೆ ಪ್ರಚೋದನೆ ಮಾಡಿ ಪ್ರತಿದೂರು ದಾಖಲಿಸಿದ್ದಾರೆ’ ಎಂದು ಅವರು ಆರೋಪಿಸಿದರು.
‘ಪಿಎಸ್ಐಯಿಂದ ನ್ಯಾಯ ಸಿಗದ ಕಾರಣ ಪಿಎಸ್ಐ ವಿರುದ್ಧ ಗೃಹ ಸಚಿವ, ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿತ್ತು, 2025 ನವೆಂಬರ್ 11ರಂದು ಮುದಗಲ್ ಠಾಣೆಯ ಎಎಸ್ಐ ವೆಂಕಟಪ್ಪ ನಾಯ್ಕ, ಪೇದೆ ರಾಘವೇಂದ್ರ ಏಕಾಏಕಿಯಾಗಿ ಬಂದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಪೊಲೀಸ್ ರ ಮೇಲೆ ನಾವೇ ಹಲ್ಲೆ ಮಾಡಿದ್ದೇವೆ ಎಂದು ಸುಳ್ಳು ಕೇಸ್ ದಾಖಲಿಸಲಾಗಿದೆ’ ಎಂದು ಅವರು ತಿಳಿಸಿದರು.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು. ಕೂಡಲೇ ಪಿಎಸ್ಐ ವೆಂಕಟೇಶ ಮಾಡಗೇರಿ ಅವರ ವಿರುದ್ಧ ಎಸ್ ಸಿ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಸೇವೆಯಿಂದ ಅಮಾನತ್ ಮಾಡಬೇಕು. ನಮ್ಮ ಮೇಲೆ ಹಾಕಿರುವ ಸುಳ್ಳು ಕೇಸ್ ರದ್ದುಪಡಿಸಬೇಕು ಇಲ್ಲದಿದ್ದರೆ ಡಿವೈಎಸ್ಪಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.