ADVERTISEMENT

ರಾಯಚೂರು: ಲಾಕ್‌ಡೌನ್ ಪರಿಣಾಮದಿಂದ ಪೇರಲ, ಪಪ್ಪಾಯ ದರ ಕುಸಿತ

ಕೊರೊನಾ ಹಾವಳಿಗೆ ಸಂಕಷ್ಟಕ್ಕೀಡಾದ ರೈತರು

ಬಸವರಾಜ ಬೋಗಾವತಿ
Published 3 ಏಪ್ರಿಲ್ 2020, 19:45 IST
Last Updated 3 ಏಪ್ರಿಲ್ 2020, 19:45 IST
ಮಾನ್ವಿಯ ಕೃಪಾಸಾಗರ ಪಾಟೀಲ ಅವರ ತೋಟದಲ್ಲಿ ಬೆಳೆದಿರುವ ಪೇರಲ
ಮಾನ್ವಿಯ ಕೃಪಾಸಾಗರ ಪಾಟೀಲ ಅವರ ತೋಟದಲ್ಲಿ ಬೆಳೆದಿರುವ ಪೇರಲ   

ಮಾನ್ವಿ: ಕೊರೊನಾ ವೈರಸ್ ಹಾವಳಿಯಿಂದ ಕೇಂದ್ರ ಸರ್ಕಾರ ಘೋಷಿಸಿರುವ ಲಾಕ್‌ಡೌನ್‍ಗೆ ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 1.71ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪೈಕಿ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿಗೆ 80 ಹೆಕ್ಟೇರ್ ಪ್ರದೇಶದಲ್ಲಿ ಪೇರಲ ಹಾಗೂ 50 ಹೆಕ್ಟೇರ್ ಪ್ರದೇಶದಲ್ಲಿ ಪಪ್ಪಾಯ ಬೆಳೆಯಲಾಗಿತ್ತು.

ಈಗ ಪೇರಲ ಹಾಗೂ ಪಪ್ಪಾಯ ಬೆಳೆಗಳು ಕಟಾವು ಹಂತಕ್ಕೆ ಬಂದಿವೆ. ಕೊರೊನಾ ಹಾವಳಿಯಿಂದ ಖರೀದಿದಾರರು, ಸಗಟು ವ್ಯಾಪಾರಸ್ಥರು ಹಣ್ಣುಗಳ ಖರೀದಿಗೆ ಬಾರದಿರುವುದು ದರ ಕುಸಿತಕ್ಕೆ ಕಾರಣವಾಗಿದೆ.

ADVERTISEMENT

ಸ್ಥಳೀಯ ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಿಗಳು ಖರೀದಿಗೆ ಮುಂದಾದರೂ ಕೂಡ ಅತೀ ಕಡಿಮೆ ದರದಲ್ಲಿ ಖರೀದಿಸುವುದಾಗಿ ಹೇಳುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಲಾಕ್‌ಡೌನ್ ಘೋಷಣೆಯಾಗುವ ಮೊದಲು ಪ್ರತಿ ಕೆಜಿಗೆ 12 ರೂಪಾಯಿಯಂತೆ ಮಾರಾಟವಾಗುತ್ತಿದ್ದ ಪಪ್ಪಾಯ ₹5 ಗೆ ಕುಸಿದಿದೆ. ಪ್ರತಿ ಕೆಜಿಗೆ ₹40 ಗೆ ಮಾರಾಟವಾಗುತ್ತಿದ್ದ ಪೇರಲ ಹಣ್ಣಿನ ಬೆಲೆ ₹20 ಕ್ಕೆ ಕುಸಿದಿದೆ.

‘ಹೆಚ್ಚುತ್ತಿರುವ ಉಷ್ಣತೆಯಿಂದ ಪೇರಲ ಹಣ್ಣುಗಳು ಕೆಂಪು, ಕಂದು ಬಣ್ಣಕ್ಕೆ ತಿರುಗುತ್ತಿವೆ. ನಿರ್ವಹಣೆಗೆ ಕೂಲಿಕಾರರು ಬರುತ್ತಿಲ್ಲ. ಇಳುವರಿಯಲ್ಲಿಯೂ ಕುಸಿತವಾಗಿದೆ. ಕಾರಣ ಪೇರಲ ಹಣ್ಣಿನ ದರದ ಬೇಡಿಕೆ ಕಡಿಮೆಯಾಗಿ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಕೃಪಾಸಾಗರ ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಮಾನ್ವಿ, ಆರ್.ಜಿ.ಕ್ಯಾಂಪ್, ಸಿರವಾರ ಸೇರಿ ವಿವಿಧೆಡೆ ಪೇರಲ ಬೆಳೆದ ರೈತರು ದರ ಕುಸಿತದಿಂದ ಕಂಗಾಲಾಗಿದ್ದು ಸರ್ಕಾರ ತೋಟಗಾರಿಕೆ ಬೆಳೆಗಳ ಖರೀದಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಬೆಳೆ ಹಾನಿ ಸೂಕ್ತ ಪರಿಹಾರ ನೀಡಬೇಕ ಎಂದು ಒತ್ತಾಯಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಮಾತನಾಡಿ, ‘ತಾಲ್ಲೂಕಿನಲ್ಲಿ ಪೇರಲ, ಪಪ್ಪಾಯ, ದಾಳಿಂಬೆ ಹಾಗೂ ಮೆಣಸಿನಕಾಯಿ ಬೆಳೆದ ರೈತರು ಲಾಭದ ನಿರೀಕ್ಷೆಯಲ್ಲಿದ್ದರು. ಈಗ ಖರೀದಿದಾರರ ಕೊರತೆ ದರ ಕಸಿತಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬೆಳೆಗಳ ನಿರ್ವಹಣೆಗೆ ಅಗತ್ಯ ಸಲಹೆ, ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.