ADVERTISEMENT

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರು ದಿನವೇ ರೈತರ ಬೆಳೆ ಸಾಲ ಮನ್ನಾ: ಜಿ. ಕುಮಾರ

ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 4:48 IST
Last Updated 26 ಏಪ್ರಿಲ್ 2024, 4:48 IST
ಜಾಲಹಳ್ಳಿ ಪಟ್ಟಣದ ಅಂಬಿಗೇರ ಚೌಡಯ್ಯ ಭವನದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿದರು
ಜಾಲಹಳ್ಳಿ ಪಟ್ಟಣದ ಅಂಬಿಗೇರ ಚೌಡಯ್ಯ ಭವನದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿದರು   

ಜಾಲಹಳ್ಳಿ: ಕೇಂದ್ರದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದ ಮರು ದಿನವೇ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಹೇಳಿದರು.

ಗುರುವಾರ ಪಟ್ಟಣದ ನಿಜ ಶರಣ ಅಂಬಿಗೇರ ಚೌಡಯ್ಯ ಭವನದಲ್ಲಿ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

ದೇಶದಲ್ಲಿ ತಿನ್ನಲು ಅನ್ನ ಇಲ್ಲದಂತಹ ಸಂದರ್ಭದಲ್ಲಿ ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ನೀಡಿದರು. ಆದರೂ ಕಾಂಗ್ರೆಸ್ ಪಕ್ಷ ಸದೃಢ ಭಾರತ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ADVERTISEMENT

ತಮ್ಮ ಜೀವನವೇ ಈ ದೇಶದ ಅಭಿವೃದ್ದಿಗೆ ಮುಡಿಪಾಗಿ ಇಟ್ಟು ಅಭಿವೃದ್ಧಿಗಾಗಿಯೇ ದುಡಿದವರ ಬಗ್ಗೆ ಈಗಿನ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದೇಶದ ಜನತೆಗಾಗಿ ಅನ್ನದ ಕೊರತೆ ಇಲ್ಲದಂತೆ ನೀರಾವರಿ ಸೌಲಭ್ಯ, ಉದ್ಯೋಗಕ್ಕಾಗಿ ದೊಡ್ಡ, ದೊಡ್ಡ ಕೈಗಾಗಿಕೆಗಳ ಸ್ಥಾಪನೆ, ಸಾರಿಗೆ, ರೈಲು, ವಿಮಾನ, ವಿದ್ಯಾ ಕೇಂದ್ರ, ಆಸ್ಪತ್ರೆಗಳನ್ನು ನಿರ್ಮಿಸಿ ಜಗತ್ತಿನಲ್ಲಿ ಬೆಂಗಳೂರು ನಗರಕ್ಕೆ ಹೆಸರು ಬರುವಂತೆ ಮಾಡಿರುವುದು ಕಾಂಗ್ರೆಸ್ ಪಕ್ಷದ ಹಾಗೂ ಅ ಪಕ್ಷದ ನಾಯಕ ಕೊಡುಗೆ ಎಂದರು.

ನಿತ್ಯ ಸುಳ್ಳು ಹೇಳಿಕೊಂಡು, ಜನತೆಗೆ ದಾರಿ ತಪ್ಪಿಸುವ ಕೆಲಸ ಮಾಡಿಕೊಂಡಿರುವ ಬಿಜೆಪಿ ನಾಯಕರ ಮಾತಿಗೆ ಜನತೆ ಬೆಲೆ ನೀಡದೇ ತಮ್ಮಗೆ ಬೆಂಬಲಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ಬಿಜೆಪಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ 10 ವರ್ಷಗಳಿಂದ ಅಧಿಕಾರದಲ್ಲಿ ಇದೆ. ರೈತರಿಗಾಗಿ, ಮಹಿಳಯರಿಗಾಗಿ, ಯುವಕರಿಗಾಗಿ, ಮಕ್ಕಳಿಗಾಗಿ ಕಾರ್ಮಿಕರಿಗೆ ಅನುಕೂಲವಾಗುವಂತಹ ಒಂದೇ ಒಂದು ಯೋಜನೆ ತಂದಿಲ್ಲ. ಅವರ ಜೀವಮಟ್ಟ ಸುಧಾರಣೆ ಯಾವುದೇ ಕ್ರಮ ಕೈಗೊಳ್ಳದೇ ಬರೀ ಸುಳ್ಳು ಹೇಳಿಕೊಂಡು ಕಾಲ ಹರಣ ಮಾಡಿದೆ. ತಮಗೆ ಬೇಕಾದ ಬಂಡವಾಳಗಾರಿಗೆ ಮಾತ್ರ ₹15ಲಕ್ಷ ಕೋಟಿ ಮನ್ನಾ ಮಾಡಿದೆ. ಅದ್ದರಿಂದ ರೈತರು, ಯುವಕರು, ಮಹಿಳೆಯರು ಈ ಬಾರಿಯ ಚುನಾವಣೆಯಲ್ಲಿ ಧರ್ಮ, ಅಧರ್ಮಗಳ ಮಧ್ಯೆ ನಡೆದಿರುವ ಚುನಾವಣೆಯಾಗಿದ್ದು, ಮತದಾರರು ತುಂಬಾ ಗಂಭೀರವಾಗಿ ಯೋಜನೆ ಮಾಡಿ ಮತದಾನ ಮಾಡಬೇಕಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಜಿ.ಕುಮಾರ ನಾಯಕ ಅವರು ಈ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿರುವ ಅನುಭವ ಇದೆ. ಜಿಲ್ಲೆಯ ಬಗ್ಗೆ ಅವರಿಗೆ ಅರಿವಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪರ ಮತ ಚಲಾಯಿಸಬೇಕು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಮುಖಂಡರಾದ ರವಿ ಪಾಟೀಲ, ರಾಜಶೇಖರ ನಾಯಕ, ಶ್ರೀ ದೇವಿ ನಾಯಕ, ರಾಮಣ್ಣ ಇರಬಗೇರ, ವೇಣುಗೋಪಾಲ ನಾಯಕ, ಅದನಗೌಡ ಪಾಟೀಲ, ವಿ.ಎಂ ಮೇಟಿ, ಅಬ್ದುಲ್ ಅಜೀಜ್, ಅಂಬಣ್ಣ ಅರೋಲಿ, ಮರಿಲಿಂಗಪ್ಪ ವಕೀಲರು, ಅಮೀನುದ್ದೀನ್, ಸಾಜೀದ್, ಎಚ್.ಪಿ ಬಸವರಾಜ, ಹನುಮಂತಪ್ಪ, ಯಲ್ಲಪ್ಪ ಚಪ್ಪಳಕಿ, ರಾಜಾ ವಾಸುದೇವ ನಾಯಕ ವಕೀಲರು, ಯಂಕೋಬ ಕೋಲ್ಕಾರ್ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

ಜಾಲಹಳ್ಳಿ ಪಟ್ಟಣದಲ್ಲಿ ಗುರುವಾರ ಅಂಬಿಗೇರ ಚೌಡಯ್ಯ ಭವನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಕಾರ್ಯಕರ್ತರ ಸಭೆ ಭಾಗವಹಿಸಿದ ಕಾರ್ಯಕರ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.