ರಾಯಚೂರು: ಎಲ್ಲೆಡೆಯಲ್ಲೂ ಕೋವಿಡ್ ಮಹಾಮಾರಿ ಆವರಿಸಿರುವುದರಿಂದ ಈ ವರ್ಷ ಮಕರ ಸಂಕ್ರಮಣವನ್ನು ಜನರು ತುಂಬಾ ಸರಳವಾಗಿ ಆಚರಿಸಿದರು.
ಬಹುತೇಕ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಮಂದಿ ಎಲ್ಲರೂ ನದಿತೀರಕ್ಕೆ ಹೋಗಿ ಸ್ನಾನ ಪುಣ್ಯಸ್ನಾನ ಮಾಡಿಕೊಂಡು, ಒಟ್ಟಾಗಿ ಭಕ್ಷ್ಯಭೋಜನ ಸವಿಯುವುದು ಸಂಪ್ರದಾಯ. ಆದರೆ, ಈ ವರ್ಷ ಮನೆಗಳಲ್ಲಿಯೇ ಸಂಭ್ರಮ ಸಿಮೀತವಾಗಿತ್ತು. ಹತ್ತಿರದ ದೇವಸ್ಥಾನಗಳಿಗೆ ತೆರಳಿ, ದರ್ಶನ ಪಡೆದು ಪುನೀತರಾದರು.
ಕೃಷ್ಣಾ ಹಾಗೂ ತುಂಗಭದ್ರಾ ನದಿ ತೀರಗಳಲ್ಲಿ ಈ ವರ್ಷ ಜನದಟ್ಟಣೆ ಇರಲಿಲ್ಲ. ಅಲ್ಲಲ್ಲಿ ಜನರು ಗುಂಪುಗಳಿದ್ದವು. ಕೆಲವರು ಕುಟುಂಬ ಸಮೇತರಾಗಿ ಬಂದಿದ್ದರು. ಸೂರ್ಯನು ಉತ್ತರಾಯಣ ಪರ್ವಕಾಲ ಪೂರ್ಣಗೊಳಿಸಿ ದಕ್ಷಿಣಾಯನ ಆರಂಭಿಸುವ ಪರ್ವಕಾಲದಲ್ಲಿ ನದಿಸ್ನಾನ ಮಾಡುವುದು ವಿಶೇಷ. ಹೀಗಾಗಿ ನದಿಯಲ್ಲಿ ಮಿಂದು ಪೂಜೆ ಸಲ್ಲಿಸುತ್ತಿರುವುದು ಕಂಡುಬಂತು.
ದೇವಸುಗೂರು, ಕಾಡ್ಲೂರು, ಮಂತ್ರಾಲಯ, ಎಲೆಬಿಚ್ಚಾಲೆ ಸೇರಿಂತೆ ವಿವಿಧೆಡೆ ಜನರು ಸ್ನಾನ ಮಾಡಿದರು. ಜನರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಆನಂತರ ಸಜ್ಜೆ ರೊಟ್ಟಿ, ಶೇಂಗಾ ಪುಡಿ, ಅಗಸಿಪಡಿ, ಕಾಳುಗಳ ಮಿಶ್ರಣ ಪಲ್ಲೆ, ಹಸಿರು ಪಲ್ಲೆ, ಚಪಾತಿ, ಭಜ್ಜಿ, ಮಜ್ಜಿಗೆ, ಹುಗ್ಗಿ, ಹೋಳಿಗೆ, ಚಿತ್ರಾನ್ನ, ಮೊಸರನ್ನ.. ಚವಳೆಕಾಯಿ ಪಲ್ಲೆ.. ಹೀಗೆ ತರಹೇವಾರಿ ಭಕ್ಷ್ಯಭೋಜನ ಸವಿದರು.
ಎಂದಿನಂತೆ ಸಂಭ್ರಮ ಇರಲಿಲ್ಲ. ಕೋವಿಡ್ ಸೋಂಕು ಜಿಲ್ಲೆಯಲ್ಲಿ ಈಚೆಗೆ ವ್ಯಾಪಿಸಿಕೊಳ್ಳುತ್ತಿದ್ದು, ಜನರು ಜಾಗೃತಿ ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.