ADVERTISEMENT

ಮಂಟೇಸ್ವಾಮಿ ಅಲ್ಲಮನ ಪ್ರತಿರೂಪ: ವಿಶ್ರಾಂತ ಪ್ರಾಧ್ಯಾಪಕ ಎ.ಎಂ.ಶಿವಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:45 IST
Last Updated 3 ಜನವರಿ 2026, 6:45 IST
ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ‘ಮಂಟೇಸ್ವಾಮಿ ಕಾವ್ಯ : ಸಾಂಸ್ಕøತಿಕ ಪಲ್ಲಟಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು
ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ‘ಮಂಟೇಸ್ವಾಮಿ ಕಾವ್ಯ : ಸಾಂಸ್ಕøತಿಕ ಪಲ್ಲಟಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು   

ರಾಯಚೂರು: ‘ಮಂಟೇಸ್ವಾಮಿ ಧರೆಗೆ ದೊಡ್ಡವರು. ವಚನ ಚಳವಳಿಯ ಉದಾತ್ತವಾದ ಮಾನವೀಯ ಗುಣಗಳ ಮುಂದುವರಿಕೆಯಂತಿರುವ ಮಂಟೇಸ್ವಾಮಿಯನ್ನು ಜನಪದರು ಅಲ್ಲಮಪ್ರಭುವಿನ ಪ್ರತಿರೂಪ ಎಂದು ಭಾವಿಸಿದ್ದಾರೆ’ ಎಂದು ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಎ.ಎಂ.ಶಿವಸ್ವಾಮಿ ಹೇಳಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ‘ಮಂಟೇಸ್ವಾಮಿ ಕಾವ್ಯ: ಸಾಂಸ್ಕೃತಿಕ ಪಲ್ಲಟಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

‘ಮಂಟೇಸ್ವಾಮಿ ಪರಂಪರೆ ಮೈಸೂರು ಭಾಗದಲ್ಲಿ ಸಾಕಷ್ಟು ಒಕ್ಕಲುಗಳನ್ನು ಹೊಂದಿದ್ದರೆ, ಕಲಬುರಗಿ-ಯಾದಗಿರಿ ಪ್ರದೇಶದಲ್ಲಿ ಕೊಡೇಕಲ್ಲು ಬಸವಣ್ಣ ಪರಂಪರೆ ಬಹಳಷ್ಟು ಅನುಯಾಯಿಗಳನ್ನು ಹೊಂದಿದ ಆರೂಢ ಸಿದ್ಧಪಂಥ. ಈ ಎರಡೂ ಪರಂಪರೆಗಳು ಪರಧರ್ಮವನ್ನು ಸಹಿಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಜಾತಿ, ಮತ, ಧರ್ಮಗಳ ನಡುವೆ ಸೌಹಾರ್ದತೆ, ಏಕತೆಯನ್ನು ಪ್ರತಿಪಾದಿಸುತ್ತವೆ. ಎಡವಿದ ಕಾಲು ಮತ್ತೆ ಎಡವಬಹುದು, ಆದರೆ, ನುಡಿವ ನಾಲಿಗೆ ಎಡವಬಾರದು ಎಂದು ಎಚ್ಚರಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಮಂಟೇಸ್ವಾಮಿ, ಕೊಡೇಕಲ್ಲು ಪರಂಪರೆ ಬಯಸಿದ್ದು ಮತ್ತು ಅಂಬೇಡ್ಕರ್, ಗಾಂಧಿ, ಭಗತ್‍ಸಿಂಗ್‍ರಂಥವರು ಬಯಸಿದ್ದೂ ಕೂಡ ಜಾತಿ ವಿನಾಶವನ್ನೇ. ಇವರೆಲ್ಲ ಸಮಾನತೆಯನ್ನು ಬಯಸಿ ಮಾನವೀಯವಾಗಿ ಬದುಕಿದರು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ‘ವಚನ ಚಳವಳಿ ಕಟ್ಟಿಕೊಟ್ಟ ಜಾತ್ಯತೀತ ಭಾವನೆಗಳನ್ನು ಮಂಟೇಸ್ವಾಮಿ ಮರು ರೂಪಿಸುತ್ತ ಹೋಗುತ್ತಾರೆ. ಮಡಿ, ಮೈಲಿಗೆ, ಜಾತಿ ಶ್ರೇಷ್ಠತೆಯನ್ನು ಮಂಟೇಸ್ವಾಮಿ ಕಾವ್ಯ ಪ್ರಶ್ನಿಸುತ್ತ ಹೋಗುತ್ತದೆ. ಅದು ಜಾತಿಯ ಅಹಂಕಾರಗಳನ್ನು ಒಡೆದು ಹಾಕುತ್ತ ತನ್ನ ಒಕ್ಕಲುಗಳನ್ನಾಗಿ ಮಾಡಿಕೊಳ್ಳುತ್ತದೆ’ ಎಂದು ವಿಶ್ಲೇಷಿಸಿದರು.

‘ಜಾತಿ, ಆಹಾರ ಕ್ರಮದ ಕುರಿತಾಗಿ ಮಂಟೇಸ್ವಾಮಿ ಕಾವ್ಯ ಜಿಜ್ಞಾಸೆಯನ್ನು ನಡೆಸುತ್ತದೆ. ಮಂಟೇಸ್ವಾಮಿ ಎಂದರೆ ಭಿನ್ನಬೇಧವಿಲ್ಲದ ಜಾತಿಗಳನ್ನು ಒಂದು ಮಾಡಿ ಸೌಹರ್ಧತೆಯಿಂದ ಬೆಳಗುವ ಪರಂಜ್ಯೋತಿ’ ಎಂದು ಬಣ್ಣಿಸಿದರು.

ಉಪ ಕುಲಸಚಿವ ಕೆ.ವೆಂಕಟೇಶ್ ಮಾತನಾಡಿ, ‘ನಮ್ಮ ವಿಶ್ವವಿದ್ಯಾನಿಲಯ ಮಂಟೇಸ್ವಾಮಿಯನ್ನು ನೆನೆಯುವದರ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿದೆ. ಮಂಟೇಸ್ವಾಮಿಯವರು ನಮ್ಮ ಕೊಡೇಕಲ್ಲಿನವರು ಎಂಬುದು ನಮ್ಮ ಹೆಮ್ಮೆ. ವಿಮರ್ಶಕ ಡಿ.ಆರ್.ನಾಗರಾಜ್ ಮಂಟೇಸ್ವಾಮಿಯವರನ್ನು ಸಾಂಸ್ಕೃತಿಕ ದಂಗೆಕೋರ ಎಂದು ಅಭಿಪ್ರಾಯಿಸುತ್ತಾರೆ. ಮಂಟೇಸ್ವಾಮಿ ಬದುಕಿನ ಮಾದರಿ ಎಂದು ಹೇಳಿದರು.

ಕುಲಸಚಿವ ಡಾ.ಎ.ಚನ್ನಪ್ಪ, ಕುಲಸಚಿವ (ಮೌಲ್ಯಮಾಪನ) ಪ್ರೊ.ಜ್ಯೋತಿ ಧಮ್ಮ ಪ್ರಕಾಶ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಸುಯಮೀಂದ್ರ ಕುಲಕರ್ಣಿ, ಕಲಾ ನಿಕಾಯದ ಡೀನ್ ಎಂ.ಎಸ್.ಲತಾ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಪಾರ್ವತಿ ಸಿ.ಎಸ್. ಉಪಸ್ಥಿತರಿದ್ದರು.

ವಿಶ್ರಾಂತ ಪ್ರಾಧ್ಯಾಪಕ ಎ.ಎಂ.ಶಿವಸ್ವಾಮಿ ಅವರು ಮಂಟೇಸ್ವಾಮಿ ಕಾವ್ಯವನ್ನು ಮನೋಜ್ಞವಾಗಿ ಹಾಡಿ, ವ್ಯಾಖ್ಯಾನಿಸಿದರು. ಉಪನ್ಯಾಸಕಿ ರಾಜೇಶ್ವರಿ ನಿರೂಪಿಸಿದರು. ಶರಣಪ್ಪ ಚಲವಾದಿ ಸ್ವಾಗತಿಸಿದರು. ಡಾ.ಗೀತಾಂಜಲಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.