ADVERTISEMENT

ಮಂತ್ರಾಲಯ ಮಠ ತವರೂರು ಇದ್ದಂತೆ: ಶಿವರಾಜಕುಮಾರ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 12:24 IST
Last Updated 3 ಡಿಸೆಂಬರ್ 2022, 12:24 IST
ಶಿವರಾಜಕುಮಾರ್‌
ಶಿವರಾಜಕುಮಾರ್‌   

ರಾಯಚೂರು: ‘ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಪಡೆದು, ಪೀಠಾಧಿಪತಿ ಸ್ವಾಮೀಜಿಯನ್ನು ಭೇಟಿ ಮಾಡಿದೆ. ನಮ್ಮ ಪರಿವಾರಕ್ಕೆ ಮಂತ್ರಾಲಯ ಮಠವು ತವರೂರು ಇದ್ದಂತೆ. ಇಂಥ ಭಾಗ್ಯ ಎಲ್ಲರಿಗೂ ಸಿಗೋದಿಲ್ಲ’ ಎಂದು ಚಲನಚಿತ್ರ ನಟ ಶಿವರಾಜಕುಮಾರ್‌ ಹೇಳಿದರು.

ಗೀತಾ ಪ್ರೋಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ತಮ್ಮ ಮೊದಲ ಚಲನಚಿತ್ರ ‘ವೇದ‘ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂರ್ವ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

'ರಾಯಚೂರಿನಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಇದೇ ಮೊದಲು. ಆದರೆ ಮಂತ್ರಾಲಯ ಹಾಗೂ ಬೇರೆ ಜಿಲ್ಲೆಗಳಿಗೆ ತೆರಳುವ ಮಾರ್ಗದಲ್ಲಿ ರಾಯಚೂರಿಗೆ ಸಾಕಷ್ಟು ಸಲ ಬಂದಿದ್ದೇನೆ. ಅಭಿಮಾನಿಗಳೊಂದಿಗೆ ಮಾತನಾಡಿದ್ದೇನೆ' ಎಂದರು.

ADVERTISEMENT

‘ವೇದ ಎಂದರೆ ಪ್ರಾಚೀನ ನಾಲ್ಕು ವೇದಗಳಲ್ಲ. ಮನುಷ್ಯನ ಜೀವನದಲ್ಲಿಯೂ ಪ್ರೀತಿ, ಬಾಳು, ನಂಬಿಕೆ ಹಾಗೂ ಕೋಪಗಳು ಬಂದು ಹೋಗುತ್ತವೆ. ಈ ನಾಲ್ಕು ಅಂಶಗಳನ್ನು ಒಳಗೊಂಡ ಒಂದು ಪಾತ್ರ ಇದರಲ್ಲಿದೆ. ನನ್ನ 125ನೇ ಚಲನಚಿತ್ರವಾಗಿದ್ದು, ಎಲ್ಲರೂ ಬೆಂಬಲಿಸಬೇಕು‘ ಎಂದು ಕೋರಿದರು.

‘ಅಪ್ಪಾಜಿ ಅವರು ಈ ಭಾಗಕ್ಕೆ ಅನೇಕ ಸಲ ಭೇಟಿ ನೀಡಿರುವುದು ನೆನಪಿದೆ. ಕಲ್ಯಾಣ ಕರ್ನಾಟಕ ಭಾಗದ ಬರಹಗಾರರು, ನಿರ್ದೇಶಕರಿಗೆ ನನ್ನ ಚಿತ್ರಗಳಲ್ಲಿ ಅನೇಕರಿಗೆ ಅವಕಾಶ ನೀಡಲಾಗಿದೆ. ಅದು ಹಾಗೇ ಮುಂದುವರಿಯಲಿದೆ‘ ಎಂದರು.

’ಈ ಭಾಗದ ನೆಲ, ಜಲ ಪರ ರೈತರ ಹೋರಾಟಕ್ಕೆ ನನ್ನದು ಸದಾ ಬೆಂಬಲ ಇರುತ್ತದೆ. ಸಮಸ್ಯೆಗಳು ನನ್ನ ಗಮನಕ್ಕೆ ಬಂದಾಗ ಸ್ಪಂದಿಸದೆ ಇರುವುದಿಲ್ಲ‘ ಎಂದು ಹೇಳಿದರು.

‘ವೇದ’ ಚಲನಚಿತ್ರ ನಿರ್ದೇಶಕ ಹರ್ಷಾ ಮಾತನಾಡಿ, ‘ಹ್ಯಾಟ್ರಿಕ್‌ ಹಿರೋ ಶಿವರಾಜಕುಮಾರ್‌ ಅವರೊಂದಿಗೆ ಇದು ನನ್ನ ಮೂರನೇ ಚಿತ್ರವಾಗಿದೆ. ಇಡೀ ಕುಟುಂಬವರ್ಗದವರು ನೋಡುವಂತಹ ಉತ್ತಮ ಚಿತ್ರ ಮಾಡಲಾಗಿದೆ. ಎಲ್ಲರೂ ಥೇಟರ್‌ಗೆ ಬಂದು ವೀಕ್ಷಿಸಿ. ಇದೇ ಡಿಸೆಂಬರ್‌ 23 ರಂದು ಚಿತ್ರವು ತೆರೆ ಕಾಣಲಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.