ರಾಯಚೂರು: ಮಂತ್ರಾಲಯದ ಶ್ರೀಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿ 349ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ದಿನದಂದು ಮಂಗಳವಾರ ಬೆಳಿಗ್ಗೆ ನೈರ್ಮಲ್ಯ ವಿಸರ್ಜನೆ, ಉತ್ಸವ ರಾಯರ ಮೂರ್ತಿಗೆ ಪಾದಪೂಜೆ ನಡೆಯಿತು. ಆರಾಧನೆ ಅಂಗವಾಗಿ ಪ್ರಹ್ಲಾದರಾಜರ ಮೂರ್ತಿಗೆ ವಿಶೇಷ ಪಂಚಾಮೃತಾಭಿಷೇಕ ಹಾಗೂ ಕನಕಾಭಿಷೇಕ ನಡೆಯಿತು.
ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರುಶ್ರೀಮೂಲರಾಮದೇವರ ಪೂಜೆ ಹಾಗೂ ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನಕ್ಕೆ ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿಯನ್ನು ನೆರವೇರಿಸಿದರು.
ಪ್ರತಿವರ್ಷವೂ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದಲ್ಲಿ ಪೂರ್ವರಾಧನೆ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ವರ್ಷ ಕೋವಿಡ್ ಆವರಿಸಿದ್ದರಿಂದ ಭಕ್ತರು ಮಠಕ್ಕೆ ಬರಲು ಅವಕಾಶ ನೀಡಿಲ್ಲ. ಸೊಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಆಂಧ್ರಪ್ರದೇಶ ಸರ್ಕಾರದ ಮಾರ್ಗ ಸೂಚನೆಗಳ ಪ್ರಕಾರವೇ ಮಂತ್ರಾಲಯದಲ್ಲಿ ಮಹೋತ್ಸವ ನೆರವೇರುತ್ತಿದೆ.
ಪೂರ್ವಾರಾಧನೆಯ ಕಾರ್ಯಕ್ರಮಗಳು ಸರಳ ರೀತಿಯಲ್ಲಿ ನೆರವೇರುತ್ತಿವೆ. ಮಂತ್ರಾಲಯ ವಾಹಿನಿಯಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಿರುವುದರಿಂದ ಭಕ್ತರು ಮನೆಗಳಲ್ಲಿಯೇ ಅಂತರ್ಜಾಲ ವ್ಯವಸ್ಥೆ ಮೂಲಕ ರಾಯರ ದರ್ಶನ ಪಡೆಯಲು ಸೂಚಿಸಲಾಗಿದೆ. ಶ್ರೀಮಠದ ಸಿಬ್ಬಂದಿ, ಪಂಡಿತರು, ವಿದ್ವಾಂಸರು ಮಾತ್ರ ಕಾರ್ಯಕ್ರಮದಲ್ಲಿ ಸೀಮಿತ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.