ಮಸ್ಕಿ: ನೀಲಕಂಠೇಶ್ವರ ದೇವಸ್ಥಾನಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ದೇವಸ್ಥಾನದ ಸ್ವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಪ್ರಮುಖ ಬೀದಿಗಳಲ್ಲಿ ಶ್ರೀಶೈಲ ಆದಿಪೀಠದ ಶಿವಶಂಕರ ಸ್ವಾಮೀಜಿ ಹಾಗೂ ನೀಲಕಂಠೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು. ಕುರುಹಿನ ಶೆಟ್ಟಿ ಸಮಾಜದ ನೂರಾರು ಮಹಿಳೆಯರು ಪೂರ್ಣ ಕುಂಭ ಹಾಗೂ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಗಂಗಾವತಿಯ ತಾಸಿಯಾ, ಮಹಿಳೆಯರ ಕೋಲಾಟ, ಚಿಲಿಪಿಲಿ ಗೊಂಬೆಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಸಂತೆ ಬಜಾರ್, ಕಟ್ಟೆ ದುರ್ಗಾದೇವಿ ದೇವಸ್ಥಾನ, ದೈವದಕಟ್ಟೆ, ತೇರು ಬೀದಿ, ಕನಕ ವೃತ್ತ, ಹಳೆ ಬಸ್ ನಿಲ್ದಾಣ, ಅಶೋಕ ವೃತ್ತದ ಮೂಲಕ ಸಾಗಿದ ಮೆರವಣಿಗೆ ಮುದಗಲ್ ರಸ್ತೆಯಲ್ಲಿನ ನೀಲಕಂಠೇಶ್ವರ ದೇವಸ್ಥಾನ ತಲುಪಿತು.
ನೀಲಕಠೇಶ್ವರ ವಿಗ್ರಹಕ್ಕೆ ಅಭಿಷೇಕ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಮಾಡಲಾಯಿತು. ಶ್ರೀಶೈಲ ಆದಿಪೀಠದ ಶಿವಶಂಕರ ಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಸೇರಿ ಅನೇಕ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕುರುಹಿನ ಶೆಟ್ಟಿ, ನೇಕಾರ ಒಕ್ಕೂಟದ ಪದಾಧಿಕಾರಿಗಳು ಸೇರಿ ಅನೇಕರು ಪಾಲ್ಗೊಂಡಿದ್ದರು.
ಶಾಸಕ ಆರ್.ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಕುರುಹಿನ ಶೆಟ್ಟಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಅಂಬದಾಸ ಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಈಶಪ್ಪ ಗಂಗಾವತಿ, ಅಮರೇಶ ಜೋತಾನ್, ಪಂಪಣ್ಣ ಮಾನ್ವಿ, ಮಂಜುನಾಥ ಗೂಗಲ್, ಶಿವಕುಮಾರ ಬಾಗೋಡಿ, ವೀರೇಶ ಜಾಲಿಹಾಳ, ಬಸವರಾಜ ಸ್ಟುಡಿಯೋ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.