ADVERTISEMENT

ಹಕ್ಕುಪತ್ರ ವಿತರಣೆಗೆ ಕ್ರಮ: ಶಾಸಕ ಬಸನಗೌಡ

ಮಸ್ಕಿ: ಅಧಿಕಾರಿಗಳೊಂದಿಗೆ ಸೋಮನಾಥ ನಗರ ನಿವಾಸಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 11:09 IST
Last Updated 1 ಜುಲೈ 2022, 11:09 IST
ಮಸ್ಕಿ ಸೋಮನಾಥ ನಗರದ ಹಕ್ಕುಪತ್ರ ವಿತರಣೆ ಸಂಬಂಧ ಶುಕ್ರವಾರ ಕರೆಯಲಾಗಿದ್ದ ಅಧಿಕಾರಿಗಳ ಹಾಗೂ ಸ್ಥಳೀಯ ನಿವಾಸಿಗಳ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು
ಮಸ್ಕಿ ಸೋಮನಾಥ ನಗರದ ಹಕ್ಕುಪತ್ರ ವಿತರಣೆ ಸಂಬಂಧ ಶುಕ್ರವಾರ ಕರೆಯಲಾಗಿದ್ದ ಅಧಿಕಾರಿಗಳ ಹಾಗೂ ಸ್ಥಳೀಯ ನಿವಾಸಿಗಳ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು   

ಮಸ್ಕಿ: ‘ನೀರಾವರಿ ಇಲಾಖೆಗೆ ಸೇರಿದ್ದು ಎನ್ನಲಾದ ಸೋಮನಾಥ ನಗರದ ಜಾಗದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ವಾಸ ಮಾಡುತ್ತಿರುವ ನೂರಾರು ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕುರಿತು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಶೀಘ್ರ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದರು.

ಪಟ್ಟಣದ ಸೋಮನಾಥ ನಗರದಲ್ಲಿ ಶುಕ್ರವಾರ ನಡೆದ ನಗರದ ನಿವಾಸಿಗಳ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸೋಮನಾಥ ನಗರಕ್ಕೆ ಕಳೆದ ಮೂವತ್ತು ವರ್ಷಗಳಿಂದ ನೀರು, ಶಾಲೆ, ಕಾಂಕ್ರೀಟ್ ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಆದರೆ, ನೀರಾವರಿ ಇಲಾಖೆಗೆ ಸೇರಿದ್ದು ಈ ಜಾಗ ಎಂಬ ಉದ್ದೇಶದಿಂದ ಇದುವರೆಗೂ ಇಲ್ಲಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಾಗಿಲ್ಲ ಎಂದರು.

ನೀರಾವರಿ ಇಲಾಖೆಗೆ ಸೇರಿದ ಸುಮಾರು 20 ಎಕರೆ ಜಾಗವನ್ನು ಪುರಸಭೆಯಿಂದ ಖರೀದಿಸಿ ಹಕ್ಕು ಪತ್ರಗಳನ್ನು ನೀಡಬೇಕು. ಪುರಸಭೆಯವರು ಹೆಚ್ಚು ಕಾಳಜಿ ವಹಿಸಬೇಕಾಗಿತ್ತು. ಇನ್ನೂ 15 ದಿನಗಳ ಒಳಗಾಗಿ ಈ ನಗರದ ಸೆಟ್ ಲೈಟ್ ಸರ್ವೆ ಮಾಡಿಸಿ ನೀರಾವರಿ ಇಲಾಖೆಗೆ ಪ್ರಸ್ಥಾವ ಕಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ವರ್ಷದಲ್ಲಿ ಮೂರು ಮೂರು ಜನ ಜಿಲ್ಲಾಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡುತ್ತಿದ್ದರಿಂದ ಮಸ್ಕಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಕುಟಿಂತವಾಗಿದೆ‌. ಈಗ ಬಂದಿರುವ ಜಿಲ್ಲಾಧಿಕಾರಿಯ ಜೊತೆ ಹಕ್ಕುಪತ್ರ ವಿತರಣೆ ಸಂಬಂಧ ಚರ್ಚೆ ಮಾಡಲಾಗಿದ್ದು ಸೋಮನಾಥ ನಗರದ ಜೊತೆಗೆ ಮಿನಿ ವಿಧಾನಸೌಧ ಹಾಗೂ ಇತರೆ ತಾಲ್ಲೂಕು ಕಚೇರಿಗಳ ನಿರ್ಮಾಣಕ್ಕೆ ಬೇಕಾದ ನೂರು ಎಕರೆ ಜಾಗವನ್ನು ನೀರಾವರಿ ಇಲಾಖೆಯಿಂದ ಪಡೆಯುವ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದೆ ಎಂದರು.

ತಹಶೀಲ್ದಾರ್ ಕವಿತಾ ಆರ್. ನೀರಾವರಿ, ನಿಗಮದ ಅಧಿಕ್ಷಕ ಎಂಜಿನಿಯರ್‌ ಪ್ರಕಾಶ ರಾವ್. ಎಇಇ ದಾವುದ್, ಪುರಸಭೆ ಮ್ಯಾನೆಜರ್ ಸತ್ಯನಾರಾಯಣ , ಪುರಸಭೆ ಸದಸ್ಯರಾದ ಮಲ್ಲಯ್ಯ ಅಂಬಾಡಿ, ರಮೇಶ ಗುಡಿಸಲಿ, ಮುಖಂಡ ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ, ಸುರೇಶ ಅಂತರಗಂಗಿ, ರಾಜು ಟೇಲರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಸೋಮನಾಥ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.

ಮಾತಿನ ಚಕಮಕಿ

ಮಸ್ಕಿ: ಸೋಮನಾಥ ನಗರದ ನಿವಾಸಿಗಳ ಹಕ್ಕು ವಿತರಣೆ ಸಂಬಂಧ ತಹಶೀಲ್ದಾರ್ ಕವಿತಾ ಆರ್. ಹಾಗೂ ಹೋರಾಟ ಸಮಿತಿ ಮುಖಂಡ ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ ನಡುವೆ ಮಾತಿನ ಚಕಮಕಿ‌ ನಡೆಯಿತು.

ಹಕ್ಕು ಪತ್ರ ವಿತರಣೆ ಸಂಬಂಧ ತಾಲ್ಲೂಕು ಆಡಳಿತ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಮುಖಂಡ ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಕವಿತಾ. ಆರ್. ಅವರು, ಹಕ್ಕುಪತ್ರ ನೀಡುವುದು ಪುರಸಭೆಗೆ ಸೇರಿದ್ದು. ಈ ಜಾಗಕ್ಕೆ ಪರ್ಯಾಯ ಜಾಗವನ್ನು ನೀರಾವರಿ ಇಲಾಖೆ ಕೇಳಿದರೆ ಅದನ್ನು ಒದಗಿ ಕೊಡುವ ಜವಾಬ್ದಾರಿ ತಾಲ್ಲೂಕು ಆಡಳಿತದ್ದು ಎಂದರು.

ಒಂದು ಹಂತದಲ್ಲಿ ತಹಶೀಲ್ದಾರ್ ಹಾಗೂ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಶಾಸಕ ಆರ್.ಬಸನಗೌಡ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.