ADVERTISEMENT

ಸಂಘಟನಾ ಶಕ್ತಿಯಿಂದ ಗೆಲುವು

ಪ್ರಮುಖರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 11:56 IST
Last Updated 24 ನವೆಂಬರ್ 2021, 11:56 IST
ರಾಯಚೂರಿನ ಹರ್ಷಾ ಗಾರ್ಡನ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ರಾಯಚೂರು–ಕೊಪ್ಪಳ ಬಿಜೆಪಿ ಪ್ರಮುಖರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಮಾತನಾಡಿದರು
ರಾಯಚೂರಿನ ಹರ್ಷಾ ಗಾರ್ಡನ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ರಾಯಚೂರು–ಕೊಪ್ಪಳ ಬಿಜೆಪಿ ಪ್ರಮುಖರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಮಾತನಾಡಿದರು   

ರಾಯಚೂರು: ‘ರಾಯಚೂರು–ಕೊಪ್ಪಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಸಂಘಟನಾ ಶಕ್ತಿಯಿಂದಲೇ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಲಿದೆ‘ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ನಗರದ ಹರ್ಷಿತಾ ಗಾರ್ಡನ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಯಚೂರು–ಕೊಪ್ಪಳ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆ’ಯಲ್ಲಿ ಮಾತನಾಡಿದರು.

ಪ್ರತಿಯೊ‌ದು ವಾರ್ಡ್‌ನಲ್ಲಿ ಬಿಜೆಪಿ ಪರ ಪ್ರಮುಖರು ಪ್ರಚಾರ ಮಾಡಬೇಕು. ಪಕ್ಷದ‌ ಸಿದ್ಧಾಂತ, ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರು ಆಡಳಿತದ ಮೂಲಕ ಜಾರಿಮಾಡಿರುವ ಯೋಜನೆಗಳ ಬಗ್ಗೆ ತಿಳಿವಳಿಕೆ ಕೊಟ್ಟು ಮತಗಳನ್ನು ಪಡೆದುಕೊಳ್ಳೋಣ ಎಂದು ಹೇಳಿದರು.

ADVERTISEMENT

‘ಸ್ವಾತಂತ್ರ್ಯ ನಂತರ ದೇಶದ ಗೌರವವನ್ನು ಉನ್ನತ ಮಟ್ಟಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೆಗೆದುಕೊಂಡು ಹೋಗಿದ್ದಾರೆ. ಕಪ್ಪು ಚುಕ್ಕೆ ಇಲ್ಲದೆ ಆಡಳಿತ ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವು ವಿಳಾಸ ಕಳೆದುಕೊಳ್ಳುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನೋಡಿ ಜನರು ಮರುಆಯ್ಕೆ ಮಾಡಿದ್ದಾರೆ. ಜಲಜೀವನ್ಮಿಷನ್, ಉಜ್ವಲ್ ಯೋಜನೆಯಂತಹ ಹತ್ತಾರು ಯೋಜನೆಗಳನ್ನು ಜನರು ಮೆಚ್ಚಿಕೊಂಡಿದ್ದಾರೆ‘ ಎಂದು ಹೇಳಿದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ‘ಈ ಚುನಾವಣೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಬದ್ಧತೆಯಿಂದ ಎಲ್ಲರೂ ಕೆಲಸ ಮಾಡೋಣ‘ ಎಂದು ಹೇಳಿದರು.

‘ಪೊಲಿಯೋ ರೋಗಕ್ಕೆ ಲಸಿಕೆ ಕಂಡುಹಿಡಿಯಲು ಅನೇಕ ವರ್ಷಗಳು ಬೇಕಾಯಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಕೊರೊನಾ ಮಹಾಮಾರಿಗೆ ಲಸಿಕೆಯನ್ನು ಎರಡುಕಂಪೆನಿಗಳು ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಾಗಿದೆ. ಲಸಿಕೆ ಉಚಿತವಾಗಿ ನೀಡುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿ ಕೆಲಸ ಮಾಡಿದ ಕಡೆಗಳಲ್ಲಿ ಕಾಂಗ್ರೆಸ್ ಧೂಳಿಪಟ‌ ಆಗುತ್ತದೆ. ಕಾಂಗ್ರೆಸ್ ಮುಳುಗುವ ಹಡಗು, ಅದರಲ್ಲಿ ಯಾರೂ ಹತ್ತುವುದಿಲ್ಲ. ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರು ಸರಳ ಸಜ್ಜನರಾಗಿದ್ದು, ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕು‘ ಎಂದರು. ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ.ಶಿವರಾಜ ಪಾಟೀಲ, ಶಿವನಗೌಡ ನಾಯಕ, ಬಸವರಾಜ
ದಢೇಸೂಗೂರು ಮಾತನಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಮಾನಂದ ಯಾದವ್‌ ಸ್ವಾಗತಿಸಿದರು. ಶ್ರೀಧರರೆಡ್ಡಿ ನಿರೂಪಿಸಿದರು.

ಮುಂಡರಗಿ ಶಿವಣ್ಣ ತಾತಾ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಎನ್.ಶಂಕ್ರಪ್ಪ, ತಿಪ್ಪರಾಜ ಹವಾಲ್ದಾರ್, ಗಂಗಾಧರ ನಾಯಕ, ಮಾನಪ್ಪ‌ ವಜ್ಜಲ್, ಪ್ರತಾಪಗೌಡ ಪಾಟೀಲ, ಈರಣ್ಣ ಗುಡಗನ್ನವರ, ಶರಣಪ್ಪ‌ ಜಾಡಲದಿನ್ನಿ, ಹೇಮಲತಾ, ಶಿವಬಸ್ಪಪ್ಪ ಮಾಲಿಪಾಟೀಲ ಹಾಗೂ ದೊಡ್ಡನಗೌಡ ಸೇರಿ ಮತ್ತಿತರರು ಈ ವೇಳೆ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.