ADVERTISEMENT

ಹಸಿರಿನಿಂದ ಕಂಗೊಳಿಸುವ ಮಾದರಿ ಉದ್ಯಾನ

ಸುಂದರಗೊಂಡ ಸಾವಿತ್ರಿ ಕಾಲೊನಿಯ ಶ್ರೀ ಸುವಿದ್ಯೇಂದ್ರ ತೀರ್ಥ ಉದ್ಯಾನ

ಪಿ.ಹನುಮಂತು
Published 13 ಅಕ್ಟೋಬರ್ 2018, 19:45 IST
Last Updated 13 ಅಕ್ಟೋಬರ್ 2018, 19:45 IST
ಉದ್ಯಾನದಲ್ಲಿ ನಿರ್ಮಿಸಿರುವ ಕೊಳ
ಉದ್ಯಾನದಲ್ಲಿ ನಿರ್ಮಿಸಿರುವ ಕೊಳ   

ರಾಯಚೂರು: ನಗರದ ಸಾವಿತ್ರಿ ಕಾಲೊನಿಯಲ್ಲಿ ನಗರಸಭೆಯಿಂದ ನವೀಕರಣ ಮಾಡಿರುವ ಸುವಿದ್ಯೇಂದ್ರ ತೀರ್ಥರ ಉದ್ಯಾನವುಚಿಕ್ಕದಾಗಿದ್ದರೂ ಮಾದರಿರೀತಿಯಲ್ಲಿಅಭಿವೃದ್ಧಿಗೊಂಡಿದೆ. ನೋಡಲು ಆಕರ್ಷಣೀಯವಾಗಿದ್ದು, ಆಹ್ಲಾದವನ್ನುಂಟು ಮಾಡುತ್ತಿದೆ.

ಸುಮಾರು ಎರಡು ದಶಕಗಳ ಹಿಂದೆ ಬಡಾವಣೆ ನಿರ್ಮಾಣ ಮಾಡುವಾಗ ದೇವಸ್ಥಾನ ಹಾಗೂ ಉದ್ಯಾನಕ್ಕಾಗಿಜಾಗ ಮೀಸಲಾಗಿಡಲಾಗಿತ್ತು. ಇದೀಗ ಸುಂದರ ಉದ್ಯಾನವು ತಲೆ ಎತ್ತಿದೆ.ಈ ಹಿಂದಿನ ನಗರಸಭೆ ಸದಸ್ಯ ಎ.ಮಾರೆಪ್ಪ ₹3.5 ಲಕ್ಷ ವೆಚ್ಚ ಮಾಡಿ ಸುಂದರವಾದ ಉದ್ಯಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಸಾವಿತ್ರಿ ಕಾಲೊನಿಯ ಗುಡ್ಡದ ಬಳಿ ಜೋಡು ಆಂಜನೇಯ ದೇವಸ್ಥಾನವಿದೆ. ಇದರ ಪಕ್ಕದಲ್ಲೇ ನವೀಕರಣವಾದಈ ಉದ್ಯಾನದಲ್ಲಿ ಮಕ್ಕಳಿಗಾಗಿ ಜೋಕಾಲಿ, ಜಾರುಬಂಡೆ ಹಾಗೂ ಇತರೆ ಆಟಿಕೆ ಸಾಮಗ್ರಿಗಳನ್ನು ಇಡಲಾಗಿದೆ. ಪ್ರತಿದಿನ ಸಂಜೆ ಹೊತ್ತಲ್ಲಿ ಚಿಕ್ಕ ಮಕ್ಕಳ ಗುಂಪು ನೆರೆದಿರುತ್ತದೆ. ಉದ್ಯಾನದಲ್ಲಿ ಸಮರ್ಪಕ ವಿದ್ಯುತ್‌ ದೀಪದ ವ್ಯವಸ್ಥೆ ಉದ್ಯಾನವನ್ನು ಕಂಗೊಳಿಸುವಂತೆ ಮಾಡಿದೆ.

ADVERTISEMENT

ಉದ್ಯಾನದಲ್ಲಿನ ಮರಗಳ ತಂಗಾಳಿ, ಅಲಂಕಾರದಂತಿರುವ ಹೂಗಿಡಗಳು, ಕಿರು ಪಕ್ಷಿಧಾಮ ಸೊಬಗನ್ನು ಮೂಡಿಸಿವೆ. ಜೊತೆಗೆ ಶಿವನ ಮೂರ್ತಿಯನ್ನಿಡಲಾಗಿದ್ದು ಶಿವನ ಜಟೆಯಿಂದ ಚಿಮ್ಮುವ ಕಾರಂಜಿಯ ನೀರು ಮನ ಸೆಳೆಯುತ್ತದೆ. ಚಿಕ್ಕದಾದಕೊಳ ನಿರ್ಮಾಣ ಮಾಡಲಾಗಿದೆ. ಬಣ್ಣಬಣ್ದದ ವಿದ್ಯುತ್ ದೀಪದಿಂದ ಈ ಕೊಳದಲ್ಲಿನ ನೀರು ರಾತ್ರಿಯಲ್ಲಿ ಕಂಗೊಳಿಸುತ್ತದೆ. ಕೊಳದಲ್ಲಿ ಬಾತುಕೋಳಿಗಳ ವಿಹಾರದ ಕಲರವ ಇಂಪಾದ ಅನುಭವ ನೀಡುತ್ತದೆ.

ಪಕ್ಷಿಧಾಮ ವಿಭಾಗದಲ್ಲಿ 12 ಪಾರಿವಾಳಗಳು, 15 ಗಿಳಿಗಳು ಹಾಗೂ 11 ಬಾತುಕೋಳಿಗಳು ಇವೆ. ಸಾರ್ವಜನಿಕರು ಉದ್ಯಾನದಲ್ಲಿ ವಾಯುವಿಹಾರ ಮಾಡುವ ಸಲುವಾಗಿ ಅಚ್ಚುಕಟ್ಟಾದಪಥವನ್ನು ಮಾಡಲಾಗಿದೆ.ಜನರುವಿಶ್ರಾಂತಿ ಪಡೆಯಲು ಬೆಂಚ್‌ಗಳನ್ನು ಹಾಕಲಾಗಿದೆ.

’ಈ ಉದ್ಯಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ನಗರಸಭೆ ಅಮೃತ ಯೋಜನೆಯಡಿ ₹25 ಲಕ್ಷ ಅನುದಾನ ವ್ಯಯಿಸಲು ಯೋಜನೆ ಮಾಡಲಾಗಿದೆ’ ಎಂದು ನಗರಸಭೆಯ ಪೌರಾಯುಕ್ತ ರಮೇಶ ನಾಯಕ ತಿಳಿಸಿದರು.

ಉದ್ಯಾನ ಮತ್ತೆ ಅಭಿವೃದ್ಧಿ:

ಗುಡ್ಡದ ಲ್ಯಾಂಡ್‌ ಸ್ಕೇಪ್‌ ಬಳಸಿಕೊಂಡು ಇರುವಷ್ಟು ಜಾಗದಲ್ಲಿ ಒಂದು ಮಾದರಿಯಾದ ಉದ್ಯಾನವನ್ನು ಅಭಿವೃದ್ಧಿ ಮಾಡಲಾಗಿದೆ. ಆದ್ದರಿಂದ ಇದನ್ನು ಹೀಗೆ ಕಾಪಾಡಿಕೊಂಡು ಹೋಗಬೇಕು. ಅಮೃತ ಯೋಜನೆಯ ₹25 ಲಕ್ಷ ಅನುದಾನದಲ್ಲಿ ಬಡಾವಣೆಯಲ್ಲಿ ಮತ್ತೊಂದು ವಿಶಾಲವಾದ ಹೊಸ ಉದ್ಯಾನವನ್ನು ಮಾಡಬಹುದುಎನ್ನುತ್ತಾರೆನಗರಸಭೆ ಮಾಜಿ ಸದಸ್ಯ ಎ.ಮಾರೆಪ್ಪ.

ಹಿಂದಿನ ಅವಧಿಯಲ್ಲಿಯೇ ಇಂತಹ ಪ್ರಯತ್ನ ನಡೆದಿತ್ತು. ಅದನ್ನು ವಿರೋಧಿಸಿ ಬೇರೆಡೆ ಸ್ಥಳ ತೋರಿಸಲಾಗುವುದು ದೊಡ್ಡ ಉದ್ಯಾನ ಮಾಡಲು ಕೇಳಿಕೊಂಡಿದ್ದೆ.ಉದ್ಯಾನದಲ್ಲಿ ಸರಿಯಾಗಿ ನೀರುಣಿಸುವ ಕೆಲಸವಾಗುತ್ತಿಲ್ಲ. ಪಕ್ಷಿಗಳನ್ನು ಖಾಲಿ ಮಾಡಿಸುವ ಪ್ರಯತ್ನಗಳು ಮಾಡಲಾಗುತ್ತಿದೆ. ಮಾದರಿಯಾಗಿ ಅಭಿವೃದ್ಧಿಪಡಿಸಿರುವುದನ್ನು ಕೆಲವರು ಹಾಳು ಮಾಡುವ ಸಂಚು ರೂಪಿಸುತ್ತಿದ್ದಾರೆಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.