ಲಿಂಗಸುಗೂರು: ತಾಲ್ಲೂಕಿನಾದ್ಯಂತ ಮಂಗಳವಾರ ದಫನ್ ಆಚರಣೆ ಮಾಡಲಾಯಿತು.
ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ಹುಸೇನ್-ಹಸೇನ್ ಮತ್ತು ಕಾಶಿಂ ಪೀರ ಆಲಂಗಳಿಗೆ ವಿಶೇಷ ಪೂಜೆ, ಪ್ರಾರ್ಥನೆ, ಹರಕೆ ಸಲ್ಲಿಸಲಾಯಿತು.
ಮಂಗಳವಾರ ಸಂಜೆ ಗ್ರಾಮದ ಮುಖ್ಯ ಬಜಾರ್ದಲ್ಲಿ ನೂರಾರು ಭಕ್ತರ ಆಲಂಗಳ ಭೇಟಿ ಆಗುತ್ತಿದ್ದಂತೆ ಮಂಡಕ್ಕಿ, ಉತ್ತುತ್ತಿ, ಬಾಳೆಹಣ್ಣು ಎಸೆದು ಚಪ್ಪಾಳೆ ತಟ್ಟಿ ಜಯಘೋಷ ಹಾಕಿದರು. ಕೆಲ ಕುಟುಂಬಸ್ಥರು ಕಂಬನಿ ಮಿಡಿದದ್ದು ಕಂಡುಬಂತು.
ಕರಡಕಲ್ಲ, ಕಸಬಾಲಿಂಗಸುಗೂರು, ಚಿತ್ತಾಪುರ, ಈಚನಾಳ, ಮಾವಿನಭಾವಿ, ಗುಂಡಸಾಗರ, ಮರಗಂಟನಾಳ, ಬೆಂಡೋಣಿ, ರೋಡಲಬಂಡ, ಗೋನ ವಾಟ್ಲ, ಗುಂತಗೋಳ, ದೇವರ ಭೂಪುರ, ಯರಡೋಣಿ ಇತರೆಡೆ ಬಂದ ಹಿಂದೂ ಮುಸ್ಲಿಮರು ಭಾಗವಹಿಸಿದ್ದರು.
ದಫನ್ ವೇಳೆ ಮೇಳಗಳ ಕುಣಿತ, ಕರಡಿ, ಹುಲಿ ವೇಷಧಾರಿಗಳ ನರ್ತನ, ವೈವಿಧ್ಯಮಯ ವೇಷಧಾರಿಗಳ ಕೈಚಳಕ ಜರುಗಿದವು. ಡಿವೈಎಸ್ಪಿ ಎಸ್. ಮಂಜುನಾಥ, ಪೊಲೀಸ್ ಇನ್ಸ್ಪೆಕ್ಟರ್ ಸಂಜೀವ ಕುಮಾರ ಕುಂಬಾರಗೆರೆ, ಪಿಎಸ್ಐ ಗಳಾದ ಹನುಮಂತಪ್ಪ, ಮಂಗಮ್ಮ ನೇತೃತ್ವ ದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.