ADVERTISEMENT

ರಾಯಚೂರಿನ ಸುಗಮಕುಂಟದಲ್ಲಿ ಗುಳೆ ತಪ್ಪಿಸಿದ ನರೇಗಾ

ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ನಿರ್ಮಾಣ

ಉಮಾಪತಿ ಬಿ.ರಾಮೋಜಿ
Published 3 ಮಾರ್ಚ್ 2020, 19:30 IST
Last Updated 3 ಮಾರ್ಚ್ 2020, 19:30 IST
ಶಕ್ತಿನಗರ ಬಳಿಯ ಸಗಮಕುಂಟ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಹೊಸ ಕೆರೆ ನಿರ್ಮಾಣ ಕಾರ್ಯ ನಡೆಯುತ್ತಿದೆ
ಶಕ್ತಿನಗರ ಬಳಿಯ ಸಗಮಕುಂಟ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಹೊಸ ಕೆರೆ ನಿರ್ಮಾಣ ಕಾರ್ಯ ನಡೆಯುತ್ತಿದೆ   

ಶಕ್ತಿನಗರ: ಸಗಮಕುಂಟ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ₹10 ಲಕ್ಷ ವೆಚ್ಚದಲ್ಲಿ ಹೊಸ ಕೆರೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 500 ಜನರಿಗೆ ಉದ್ಯೋಗ ನೀಡಲು ಎನ್‌ಎಂಆರ್‌ ತೆಗೆಯಲಾಗಿದೆ.

ಒಟ್ಟು 22 ಗುಂಪುಗಳಲ್ಲಿ (ಒಂದು ಗುಂಪಿನಲ್ಲಿ 30 ಜನ) ಕಳೆದ ವಾರದಿಂದ ಕೆರೆ ನಿರ್ಮಾಣ ಕೆಲಸ ನಡೆಯುತ್ತಿದೆ.

ಸಗಮಕುಂಟ, ಯರಗುಂಟ, ಶಿವವಿಲಾಸ ನಗರ, ಕೊರವಿಹಾಳ್, ಕೊರ್ತಕುಂದ ಗ್ರಾಮಗಳ ಕೂಲಿಕಾರರ ಗುಳೆ ತಡೆಗೆ ಈ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ. 5 ಎಕರೆ ಪ್ರದೇಶದ ಕೆರೆಯಲ್ಲಿ ನೀರು ಸಂಗ್ರಹವಾದರೆ, ಅಂತರ್ಜಲ ಮಟ್ಟ ಹೆಚ್ಚುವುದಲ್ಲದೆ, ಬೇಸಿಗೆಯಲ್ಲಿ ಈ ಕೆರೆ, ಜನ ಜಾನುವಾರುಗಳಿಗೆ ಹೆಚ್ಚು ಉಪಯುಕ್ತವಾಗಲಿದೆ. ರೈತರ ಹೊಲಗಳಿಗೆ ನೀರು ಹಾಯಿಸಲು, ಕೊಳವೆ ಬಾವಿಗೆ ಜಲ ಮರುಪೂರಣಕ್ಕೆ ಅನುಕೂಲ ಆಗಲಿದೆ.

ADVERTISEMENT

ಕೂಲಿ ಅರಸಿ ಗುಳೆ ಹೋಗುವುದನ್ನು ತಪ್ಪಿಸಿ, ಇಲ್ಲಿಯೇ ಕೂಲಿ ಕೆಲಸ ನೀಡುವ ಉದ್ದೇಶ ಈಡೇರಿದಂತಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್‌ ಕಾರ್ಡ್‌ ಹೊಂದಿದವರಿಗೆ 100 ದಿನ ಹಾಗೂ ಬರಗಾಲದಲ್ಲಿ 150 ದಿನ ಕೂಲಿ ನೀಡಲಾಗುತ್ತಿದೆ. ದಿನಕ್ಕೆ ₹249 ಕೂಲಿ ನೀಡುತ್ತಿದ್ದು , ಗಂಡು– ಹೆಣ್ಣು ಎನ್ನದೇ ಸಮಾನ ಕೂಲಿ ನೀಡಲಾಗುತ್ತಿದೆ ಎಂದು ಸಗಮಕುಂಟ ಪಿಡಿಒ ರವಿಕುಮಾರ
ತಿಳಿಸಿದರು.

ನರೇಗಾ ಯೋಜನೆ ನಮಗೆ ವರದಾನವಾಗಿದೆ. ಉದ್ಯೋಗ ಆರಿಸಿ ವಲಸೆ ಹೋಗುವುದನ್ನು ತಪ್ಪಿಸಿದೆ. ತಿಂಗಳುಗಟ್ಟಲೇ ಬೇರೆ
ರಾಜ್ಯಕ್ಕೆ ಕೆಲಸಕ್ಕೆ ಹೋಗಬೇಕಾಗುತ್ತಿತ್ತು. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಜೀವನ ನಡೆಸಲು ತೊಂದರೆ ಆಗುತ್ತಿತ್ತು ಎಂದು ಕೂಲಿ ಕಾರ್ಮಿಕ ಬಸವಂತ ಸಗಮಕುಂಟ
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.