ರಾಯಚೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಏರ್ಪಡಿಸಲಾಯಿತು.
ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 30,961 ಬಾಕಿ ಇರುವ ಪ್ರಕರಣಗಳಲ್ಲಿ 6,214 ಪ್ರಕರಣಗಳನ್ನು ರಾಜಿ ಸಂದಾನಕ್ಕಾಗಿ ಗುರುತಿಸಲಾಗಿತ್ತು. ಅವುಗಳಲ್ಲಿ 5,238 ಪ್ರಕರಣಗಳು ರಾಜಿಯಾದವು. 71,639 ದಾವೆ ಪೂರ್ವ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ರಾಜಿ ಸಂದಾನಕ್ಕಾಗಿ ಗುರುತಿಸಲಾಗಿತ್ತು, ಇವುಗಳಲ್ಲಿ 70,896 ಪ್ರಕರಣಗಳು ರಾಜಿಯಾಗಿವೆ.
ಒಟ್ಟು 76,134 ಪ್ರಕರಣಗಳು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗಿವೆ. ಅವುಗಳಲ್ಲಿ 337 ಸಿವಿಲ್ ಪ್ರಕರಣಗಳು, 106 ಎನ್ಐ ಆ್ಯಕ್ಟ್ ಪ್ರಕರಣಗಳು, 73 ಕೌಟುಂಬಿಕ ಪ್ರಕರಣಗಳು, 67 ರಸ್ತೆ ಅಪಘಾತದ ಪರಿಹಾರ ಪ್ರಕರಣಗಳು, 16 ಕಾರ್ಮಿಕ ನಷ್ಟ ಪರಿಹಾರದ ಪ್ರಕರಣಗಳು, 239 ವಿದ್ಯುತ್ ಶಕ್ತಿ ಪ್ರಕರಣಗಳು ಮತ್ತು 105 ರಾಜಿ ಮಾಡಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಹಾಗೂ 638 ಜನನ ಪ್ರಮಾಣ ಪತ್ರ ಕೋರಿ ಸಲ್ಲಿಸಿದ ಅರ್ಜಿಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲಾಗಿವೆ.
ಮೋಟಾರ್ ವಾಹನ ಅಪಘಾತ ಎಂ.ವಿ.ಸಿ ಪ್ರಕರಣ ಸಂಖ್ಯೆ 541/2019 ಈ ಪ್ರಕರಣವು ಪ್ರಸ್ತುತ ಲೋಕ್ ಅದಾಲತ್ನಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರಾಯಲ್ ಸುಂದರಂ ವಿಮಾ ಕಂಪನಿಯವರು ಹಾಗೂ ಅರ್ಜಿದಾರರು ₹50 ಲಕ್ಷಕ್ಕೆ ರಾಜಿ ಮಾಡಿಕೊಂಡಿರುತ್ತಾರೆ. ಇದರಿಂದ ಅರ್ಜಿದಾರರಿಗೆ ತುರ್ತಾಗಿ ಪರಿಹಾರ ಸಿಕ್ಕಿರುತ್ತದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಎಂ.ಬೇಲೂರೆ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.