ಹಟ್ಟಿ ಚಿನ್ನದಗಣಿ: ಪಟ್ಟಣದ ಚತುಷ್ಪಥ ರಸ್ತೆ ಮಧ್ಯದಲ್ಲಿ ಅಳವಡಿಸಲಾದ ವಿದ್ಯುತ್ ಕಂಬಗಳಿಗೆ ಹಾಕಲಾಗಿದ್ದ ದೀಪಗಳು ಕೆಟ್ಟುಹೋಗಿದ್ದರಿಂದ ಕಳೆದ ಒಂದೂವರೆ ವರ್ಷದಿಂದ ಮುಖ್ಯರಸ್ತೆಯಲ್ಲಿ ಕತ್ತಲಾವರಿಸಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
2015ರಲ್ಲಿ ಹಟ್ಟಿ ಚಿನ್ನದಗಣಿ ಕಂಪನಿ ಒದಗಿಸಿದ ₹ 4.89 ಕೋಟಿ ಮೊತ್ತದಲ್ಲಿ ಲೋಕೋಪಯೋಗಿ ಇಲಾಖೆ ಹಟ್ಟಿ ಪಟ್ಟಣದ ಕಾಕಾನಗರದಿಂದ ಪಾಮನಕಲ್ಲೂರು ಕ್ರಾಸ್ವರೆಗಿನ 1.6 ಕಿ.ಮೀ ಮುಖ್ಯ ರಸ್ತೆಯನ್ನು ಚತುಷ್ಪಥ ರಸ್ತೆ ನಿರ್ಮಾಣದ ಕಾಮಗಾರಿ ಜತೆಯಲ್ಲಿ ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ, ವಿದ್ಯುತ್ ದೀಪಗಳನ್ನು ಬೆಳಗಲು ಟಿ.ಸಿ.ಗಳನ್ನು ಅಳವಡಿಸಿತ್ತು. ನಿರ್ವಹಣೆ ಇಲ್ಲದೆ ಬೀದಿ ದೀಪಗಳು ಬೆಳಗುತ್ತಿಲ್ಲ. ಇದರಿಂದ ಸಾರ್ವಜನಿಕರು ಕಗ್ಗತ್ತಲಲ್ಲಿ ಸಂಚಾರ ಮಾಡುವಂತಾಗಿದೆ ಎಂದು ಸ್ಥಳೀಯರಾದ ರಮೇಶ, ಯಂಕೋಬ, ಶಿವು ಆರೋಪ ಮಾಡಿದ್ದಾರೆ.
ರಸ್ತೆಯ ಮದ್ಯದಲ್ಲಿ ಅಳವಡಿಸಲಾದ ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿ 2016ರಿಂದ ದೀಪಗಳನ್ನು ಬೆಳಗಿಸಲಾಗಿತ್ತು. ಚತುಷ್ಪಥ ರಸ್ತೆ ಮದ್ಯದಲ್ಲಿ ಬೀದಿ ದೀಪಗಳು ನಗರ ಪ್ರದೇಶದಂತೆ ಕಂಗೊಳಿಸುತ್ತಿರುವುದನ್ನು ಕಂಡ ಜನತೆ ಖುಷಿಗೊಂಡಿದ್ದರು. ಅಳವಡಿಕೆಯಾದ ಬೀದಿ ದೀಪಗಳು 2018 ಮಾರ್ಚ್ನಲ್ಲಿ ಕೆಟ್ಟು ಹೋಗಿದ್ದು ಇಂದಿನವರೆಗೂ ದುರಸ್ತಿಯಾಗಿಲ್ಲ. ಇದರಿಂದ ರಾತ್ರಿವೇಳೆ ಕತ್ತಲಲ್ಲೇ ಸಂಚಾರ ಮಾಡಬೇಕಾಗಿದೆ ಎಂಬುದು ಸಾರ್ವಜನಿಕರ ಅಳಲು.
ಪಟ್ಟಣದ ಮುಖ್ಯರಸ್ತೆ ಮತ್ತು ಒಳರಸ್ತೆಗಳ ಬೀದಿ ದೀಪಗಳ ಅಳವಡಿಕೆಗೆ ಸಂಬಂಧಿಸಿದಂತೆ ₹ 8.90 ಲಕ್ಷ ಮೊತ್ತದ ಟೆಂಡರ್ ಕರೆಯಲಾಗಿದ್ದು, ಅತಿ ಶೀಘ್ರದಲ್ಲಿ ಬೀದಿಗಳ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವದು ಎಂದುಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.