ರಾಯಚೂರು: ಸೇವೆ ಎಂಬ ಪದದ ಅರ್ಥವನ್ನು ಸಾಕಾರಗೊಳಿಸಿದ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ ಅವರಾಗಿದ್ದಾರೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಅಮರೇಶ ಹೇಳಿದರು.
ನಗರದ ಸೀತಾ ಸುಬ್ಬರಾಜು ಸ್ಮಾರಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ (ಎನ್ಎಸ್ಎಸ್) ಘಟಕದಿಂದ ಮಂಗಳವಾರ ಏರ್ಪಡಿಸಿದ್ದ ಎನ್ಎಸ್ಎಸ್ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಎನ್ಎಸ್ಎಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಿಷ್ಠೆಯಿಂದ ಸೇವೆ ಮಾಡಬೇಕು. ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಕುಟುಂಬ ಹಾಗೂ ಸಮಾಜದ ಜನರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಶ್ರೇಷ್ಠ ಸಮಾಜ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿದ್ಧಲಿಂಗಪ್ಪ ಮಾತನಾಡಿ, ಸ್ವಯಂಸೇವಕರು ಅರ್ಪಣಾ ಮನೋಭಾವದಿಂದ ಸೇವೆಯನ್ನು ಸಲ್ಲಿಸಬೇಕು. ಸೇವೆಯ ಮೂಲಕ ಭಾವನೆಗಳನ್ನು ನಿಯಂತ್ರಿಸಿ, ಮನಸ್ಸನ್ನು ಹತೋಟಿಯಲ್ಲಿಡಲು ಕಲಿಯಬೇಕು. ಇನ್ನೊಬ್ಬರ ಕಷ್ಟ, ನೋವುಗಳನ್ನು ಅರಿತುಕೊಂಡು ಅವರ ನೋವಿನಲ್ಲಿ ಭಾಗಿಯಾದಾಗ ಬದುಕಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಸ್ವಯಂಸೇವಕಿ ಪೂಜಾ ಪ್ರಾರ್ಥಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀನಿವಾಸ ರಾಯಚೂರಕರ್ ಸ್ವಾಗತಿಸಿ, ನಿರೂಪಿಸಿದರು. ಉಪನ್ಯಾಸಕ ಅಳ್ಳಪ್ಪ ವಂದಿಸಿದರು.
ಮಹಾವಿದ್ಯಾಲಯದ ಅರ್ಥಶಾಸ್ತ್ರ ಸಹಪ್ರಾಧ್ಯಾಪಕ ಬಸವರಾಜಪ್ಪ, ಉಪನ್ಯಾಸಕರಾದ ವಿಜಯಲಕ್ಷ್ಮೀ, ಪ್ರಭುದೇವ, ಸ್ವಯಂಸೇವಕರಾದ ನರಸಿಂಹಲು, ಶ್ರೀನಿವಾಸ ಮತ್ತು ತಿರುಮಲಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.