ರಾಯಚೂರು:ಜಿಲ್ಲೆಯಾದ್ಯಂತ ಮಕರಣ ಸಂಕ್ರಮಣ ಹಬ್ಬವನ್ನು ಸಂಭ್ರಮ, ಸಡಗರ ಹಾಗೂ ವಿಶೇಷ ಪೂಜೆಪುನಸ್ಕಾರಗಳೊಂದಿಗೆ ಬುಧವಾರ ಆಚರಿಸಲಾಯಿತು.
ಅನೇಕ ಜನರು ಕುಟುಂಬ ಸಮೇತರಾಗಿ ಕೃಷ್ಣಾನದಿ ಹಾಗೂ ತುಂಗಭದ್ರಾ ನದಿತೀರಗಳಿಗೆ ಹೋಗಿ ಪುಣ್ಯಸ್ನಾನ ಮಾಡಿಕೊಂಡು ಸೂರ್ಯದೇವನಿಗೆ ಪೂಜೆ ಸಲ್ಲಿಸಿದರು. ಉತ್ತರೋತ್ತರ ಅಭಿವೃದ್ಧಿಗಾಗಿ ಬೇಡಿಕೆ ಸಲ್ಲಿಸಿದರು. ನದಿತೀರಗಳಲ್ಲಿ ಕುಳಿತು ಮನೆಯಿಂದ ತೆಗೆದುಕೊಂಡು ಹೋಗಿದ್ದ ವಿಶೇಷ ಭಕ್ಷ್ಯ, ಭೋಜನಗಳನ್ನು ಸವಿದರು.
ತರಹೇವಾರಿ ತರಕಾರಿ ಪಲ್ಲೆಗಳು, ಸಜ್ಜಿರೊಟ್ಟಿ, ಹೋಳಿಗೆ ಸವಿಯಾದ ಊಟವನ್ನು ಸವಿದರು. ಕೆಲವು ಸಂಘ–ಸಂಸ್ಥೆಗಳು ಸಾಮೂಹಿಕವಾಗಿ ಸಂಕ್ರಮಣ ಆಚರಣೆ ಏರ್ಪಡಿಸಿದ್ದು ವಿಶೇಷವಾಗಿತ್ತು. ಮಕ್ಕಳು ಗಾಳಿಪಟ ಹಾರಿಸಿ ಖುಷಿ ಪಟ್ಟರು. ಪ್ರತಿ ಮನೆಗಳ ಎದುರು ಚಿತ್ತಾಕರ್ಷಕ ರಂಗೋಲಿ, ತಳಿರು ತೋರಣಗಳು ಹಬ್ಬದ ಸಡಗರವನ್ನು ಇಮ್ಮಡಿಸಿದವು.
ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜುನಿಯರ್ ಕ್ಲಬ್ ಇಂಟರ್ನ್ಯಾಷನಲ್ (ಜೆಸಿಐ) ಪದಾಧಿಕಾರಿಗಳು ಕುಟುಂಬ ಸಮೇತರಾಗಿ ಒಟ್ಟಾಗಿ ಸಂಕ್ರಮಣ ಆಚರಿಸಿ ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಯರಮರಸ್ನಲ್ಲಿರುವ ಗೋಲ್ಡ್ನ್ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ಸಂಕ್ರಮಣ ಆಚರಣೆ ಏರ್ಪಡಿಸಲಾಗಿತ್ತು.
ಕ್ರೀಡಾಂಗಣದಲ್ಲಿ ವಿಶಾಲವಾಗಿ ಬಿಡಿಸಿದ್ದ ರಂಗೋಲಿ ಮನ ಸೆಳೆಯುವಂತಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.