ADVERTISEMENT

ವಿವಿಧೆಡೆ ಕಳ್ಳತನ: 9 ಆರೋಪಿಗಳ ಬಂಧನ

₹29.28 ಲಕ್ಷ ವಸ್ತುಗಳನ್ನು ಜಪ್ತಿ ಮಾಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 14:04 IST
Last Updated 17 ನವೆಂಬರ್ 2020, 14:04 IST
ರಾಯಚೂರು ಜಿಲ್ಲೆ ಲಿಂಗಸುಗೂರು ವೃತ್ತ ವ್ಯಾಪ್ತಿ ಹಾಗೂ ದೇವದುರ್ಗ ವೃತ್ತ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಂಭತ್ತು ಕಳ್ಳರನ್ನು ಬಂಧಿಸಿ ಅಪಾರ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ
ರಾಯಚೂರು ಜಿಲ್ಲೆ ಲಿಂಗಸುಗೂರು ವೃತ್ತ ವ್ಯಾಪ್ತಿ ಹಾಗೂ ದೇವದುರ್ಗ ವೃತ್ತ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಂಭತ್ತು ಕಳ್ಳರನ್ನು ಬಂಧಿಸಿ ಅಪಾರ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ   

ರಾಯಚೂರು: ಜಿಲ್ಲೆಯ ಲಿಂಗಸುಗೂರು ಉಪವಿಭಾಗ ವ್ಯಾಪ್ತಿಯ ದೇವದುರ್ಗ, ಲಿಂಗಸುಗೂರು, ಮಸ್ಕಿ ವೃತ್ತದಲ್ಲಿ ನಡೆದಿರುವ 19 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಒಂಭತ್ತು ಕಳ್ಳತನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು ₹29.28 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಏಳು ಪ್ರಕರಣಗಳಲ್ಲಿ ಭಾಗಿಯಾದ ಯಾದಗಿರಿ ಜಿಲ್ಲೆಯ ಪ್ರಭು, ಅರ್ಜುನ, ಹೇಮ, ಭಾಷಾ, ಮಾನಪ್ಪ ಬಂಧಿತ ಆರೋಪಿಗಳು 12 ಪ್ರಕರಣಗಳಲ್ಲಿ ಭಾಗಿಯಾದ ಲಿಂಗಸುಗೂರು ತಾಲ್ಲೂಕಿನ ಗೋಕುಲಸಾಬ್, ದಾದಾಪೀರ್. ದಾವಲಸಾಬ್, ಹುಸೇನ್ ಸಾಬ್ ಬಂಧಿತ ಆರೋಪಿಗಳು. ಜಾಲಹಳ್ಳಿ, ಮಸ್ಕಿ, ಮುದಗಲ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲೆಯ ಐವರು ಹಾಗೂ ಲಿಂಗಸುಗೂರು ತಾಲ್ಲೂಕಿನ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ನಿಕ್ಕಂ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ದೇವದುರ್ಗ ವೃತ್ತ ವ್ಯಾಪ್ತಿಯಲ್ಲಿನ ಪ್ರಕರಣಗಳಲ್ಲಿ ಬಂಧಿತ ಆರೋಪಿಗಳು ದೇವರ ಮೂರ್ತಿ ಕರಗಿಸಿದ್ದ ₹4.93 ಲಕ್ಷ ಮೌಲ್ಯದ 7 ಕೆಜಿ 100 ಗ್ರಾಂ ಬೆಳ್ಳಿ, ₹1.97 ಲಕ್ಷ ಮೌಲ್ಯದ 38 ಗ್ರಾಂ ಚಿನ್ನಾಭರಣ, ₹1.53 ಲಕ್ಷ ಮೌಲ್ಯದ ಕುರಿಗಳು, ಕೃತ್ಯಕ್ಕೆ ಬಳಸಿದ್ದ ಒಂದು ಸ್ಕಾರ್ಪಿಯೋ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ಮಸ್ಕಿ ವೃತ್ತದ ವ್ಯಾಪ್ತಿಯಲ್ಲಿ 12 ಪ್ರಕರಣಗಳಿಗೆ ಸಂಬಂಧಿಸಿದಂತೆ ₹14.30 ಲಕ್ಷ ಮೌಲ್ಯದ 285 ಗ್ರಾಂ ಚಿನ್ನಾಭರಣಗಳು, ನಗದು ₹1.15 ಲಕ್ಷ, ಕೃತ್ಯಕ್ಕೆ ಬಳಸಿದ ₹40 ಸಾವಿರ ಮೌಲ್ಯದ ಒಂದು ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಲಿಂಗಸುಗೂರು ಡಿಎಸ್‌ಪಿ ಎಸ್.ಎಸ್ ಹುಲ್ಲೂರು ಅವರ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಆರ್.ಎಂ ನದಾಫ್, ದೀಪಕ್ ಭೂಸರೆಡ್ಡಿ, ಮಹಾಂತೇಶ ಸಜ್ಜನ್, ಪಿಎಸ್‍ಐಗಳಾದ ಸಾಬಯ್ಯ, ಪ್ರಕಾಶ ಡಂಬಳ, ಮುದ್ದುರಂಗಸ್ವಾಮಿ,ಡಾಕೇಶ, ಸಣ್ಣ ವೀರೇಶ, ಎಎಸ್‍ಐ ರಾಜಕುಮಾರ, ಸಿಬ್ಬಂದಿಗಳಾದ ರಾಘವೇಂದ್ರ ಶಿಂಧೆ, ದೇವಪ್ಪ, ಹುಲಗಪ್ಪ, ಬಂದಯ್ಯಮಠದ್, ನಾಗಪ್ಪ, ಗಂಗಾಧರ, ಅಯ್ಯಪ್ಪ, ರಂಗಪ್ಪ, ಬಾಲಗೌಡ, ಮುರಿಗೆಪ್ಪ, ರಾಮರೆಡ್ಡಿ, ರಾಘವೇಂದ್ರ, ಚಂದ್ರು, ರಾಘು, ಬಸನಗೌಡ, ಪಂಪಾಪತಿ, ಹುಸೇನಭಾಷಾ, ಸಿದ್ಧಪ್ಪ, ಪ್ರಕಾಶ, ಚಾಲಕರಾದ ರಂಗಣ್ಣ, ಬಸವಲಿಂಗ, ನಾಗಾರ್ಜುನ, ಸಂಗಪ್ಪ, ಅಜೀಂ ಅವರನ್ನೊಳಗೊಂಡ ವಿಶೇಷ ತಂಡವನ್ನು ಕಳ್ಳರನ್ನು ಪತ್ತೆ ಮಾಡಲು ರಚನೆ ಮಾಡಲಾಗಿತ್ತು ಎಂದು ತಿಳಿಸಿದರು.

ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಸೂಕ್ತ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.