ADVERTISEMENT

ಬಂಜಾರ ಸಮಾಜ ಪ್ರತಿಭಟನೆ: ಪೊಲೀಸರೊಂದಿಗೆ ವಾಗ್ವಾದ

ಸಂತ ಸೇವಾಲಾಲ್ ದೇವಸ್ಥಾನ ಧ್ವಂಸಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 10:47 IST
Last Updated 28 ನವೆಂಬರ್ 2019, 10:47 IST
ಸತ್ಯಸೇವಾಲಾಲ್ ದೇವಸ್ಥಾನ ದ್ವಂಸ ಖಂಡಿಸಿ ಗುರುವಾರ ಮಸ್ಕಿಯಲ್ಲಿ ಸತ್ಯಸೇವಾಲಾಲ್ ಸಮಾಜದಿಂದ ತಹಶೀಲ್ದಾರ್ ಬಲರಾಮ ಕಟ್ಟಿಮನಿಗೆ ಮನವಿ ಸಲ್ಲಿಸಲಾಯಿತು
ಸತ್ಯಸೇವಾಲಾಲ್ ದೇವಸ್ಥಾನ ದ್ವಂಸ ಖಂಡಿಸಿ ಗುರುವಾರ ಮಸ್ಕಿಯಲ್ಲಿ ಸತ್ಯಸೇವಾಲಾಲ್ ಸಮಾಜದಿಂದ ತಹಶೀಲ್ದಾರ್ ಬಲರಾಮ ಕಟ್ಟಿಮನಿಗೆ ಮನವಿ ಸಲ್ಲಿಸಲಾಯಿತು   

ಮಸ್ಕಿ: ಕಲಬುರ್ಗಿ ಜಿಲ್ಲೆಯ ಮಾದಿನಾಳ ತಾಂಡಾದಲ್ಲಿ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಸ್ಥಾನವನ್ನು ದ್ವಂಸ ಮಾಡಿರುವುದನ್ನು ಖಂಡಿಸಿ ಗುರುವಾರ ಮಸ್ಕಿಯಲ್ಲಿ ಸಂತ ಸೇವಾಲಾಲ್ ಸಮಾಜ ಸಂಘದಿಂದ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

ಮುದಗಲ್ ರಸ್ತೆಯ ಸಂತ ಸೇವಾಲಾಲ್ ವೃತ್ತದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಅಶೋಕ ವೃತ್ತ, ಹಳೆಯ ಬಸ್ ನಿಲ್ದಾಣದ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಹಳೆಯ ಬಸ್ ನಿಲ್ದಾಣದಲ್ಲಿ ಪ್ರತಿಭಟನಕಾರರು ಹೆದ್ದಾರಿ ಬಂದ್ ಮಾಡಿದ್ದರಿಂದ ಕೆಲ ಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಇದರಿಂದ ಕೆಲ ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಕೆಲವು ಪ್ರತಿಭಟನಾಕಾರರು ಪೊಲೀಸರು ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆಯಿತು. ಇದರಿಂದ ಹೆದ್ದಾರಿಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು.

ADVERTISEMENT

ಮಧ್ಯ ಪ್ರವೇಶಿಸಿದ ಸಬ್ ಇನ್‌ಸ್ಪೆಕ್ಟರ್ ಸಣ್ಣ ವೀರೇಶ ಪ್ರತಿಭಟನಾಕಾರರ ಮನವೊಲಿಸಿ ಹೆದ್ದಾರಿ ಸಂಚಾರ ಸುಗಮಗೊಳಿಸಿದರು. ನಂತರ ಕನಕವೃತ್ತದ ವೃತ್ತದ ಬಳಿ ಬಂದ ಪ್ರತಿಭಟನಾಕಾರರು ಅಲ್ಲಿಯೂ ರಸ್ತೆ ತಡೆ ನಡೆಸಿದರು. ಇಲ್ಲಿಯೂ ಕೂಡಾ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಉಂಟಾಯಿತು

ರಸ್ತೆ ಮೇಲೆ ಮನವಿ ಸಲ್ಲಿಸುವುದಾಗಿ ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಪ್ತತಿಭಟನಕಾರರಿಂದ ಮನವಿ ಸ್ವೀಕರಿಸಿದರು. ಸಂತ ಸೇವಾಲಾಲ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಅಮರೇಶ ಅಂತರಗಂಗಿ ತಾಂಡಾ, ಅಮರೇಶ ಅಡವಿಭಾವಿ ತಾಂಡಾ, ಹರಿಶ್ಚಂದ್ರ ರಾಠೋಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.